ರಾಣೆಬೆನ್ನೂರ: ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ವಿತರಿಸಬೇಕಾದ ಮೊಟ್ಟೆಗಳು ಕೊಳೆತು ಗಬ್ಬು ನಾರುತ್ತಿರುವ ಘಟನೆ ತಾಲೂಕಿನ ನೂಕಾಪುರ ಪ್ಲಾಟ್ನ ಎಚ್.ಕೆ. ಪಾಟೀಲ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಅಂಗನವಾಡಿ ಕೇಂದ್ರದಲ್ಲಿ ಒಟ್ಟು 20 ಮಕ್ಕಳಿದ್ದು, 8 ಜನ ಗರ್ಭಿಣಿ ಹಾಗೂ ಬಾಣಂತಿಯರು ಇದ್ದಾರೆ. ಅದರಲ್ಲಿ ಮಕ್ಕಳಿಗೆ ವಾರದಲ್ಲಿ 2 ದಿನ ಬುಧವಾರ ಮತ್ತು ಶುಕ್ರವಾರ ಮೊಟ್ಟೆಗಳನ್ನು ವಿತರಿಸಲಾಗುತ್ತದೆ. ಪ್ರತಿ ದಿನ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ.
ಬುಧವಾರ ಅಡುಗೆ ಸಹಾಯಕಿ ಸೋನವ್ವ ಮಕ್ಕಳಿಗೆ, ಬಾಣಂತಿಯರಿಗೆ ಕೊಡುವ ಸಲುವಾಗಿ 22 ಮೊಟ್ಟೆಗಳನ್ನು ಬೇಯಿಸಿದ್ದಾರೆ. ಅವುಗಳನ್ನು ಸುಲಿದಾಗ ಕೊಳೆತ ಮೊಟ್ಟೆಗಳು ಪತ್ತೆಯಾಗಿವೆ. ಅವುಗಳನ್ನು ನೋಡುತ್ತಿದ್ದಂತೆಯೆ ಗರ್ಭಿಣಿ, ಬಾಣಂತಿಯರು ಹಿಡಿ ಶಾಪ ಹಾಕುತ್ತ ಹೊರ ಹೋಗಿದ್ದಾರೆ.
ಸರ್ಕಾರ ಸಾಕಷ್ಟು ಹಣ ಖರ್ಚು ಮಾಡಿ ಮೊಟ್ಟೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ ಮೊಟ್ಟೆ ಪೂರೈಸುವವರು ತಮ್ಮ ಲಾಭಕ್ಕಾಗಿ ಕೊಳೆತ ಮೊಟ್ಟೆ ಪೂರೈಸಿದರೆ ನಮ್ಮ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊಳೆತ ಮೊಟ್ಟೆ ವಿತರಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.