ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ 12 ಮಂದಿ ಕಾರ್ಮಿಕರು ಸಜೀವ ದಹನವಾಗಿದ್ದರು. ಈ ಪೈಕಿ 8 ಮಂದಿಯ ಗುರುತು ಪತ್ತೆಯಾಗಿದೆ.
ಮೃತ ಎಂಟು ಕಾರ್ಮಿಕರು ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದ್ದು, ಕಾರ್ಮಿಕರೆಲ್ಲರೂ ಪದವೀಧರರಾಗಿದ್ದು, ಕೂಲಿ ಕೆಲಸಕ್ಕಾಗಿ ಪಟಾಕಿ ಗೋದಾಮಿಗೆ ಬಂದಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: ಜಿಹಾದಿಗಳು ನವರಾತ್ರಿ ಉತ್ಸವಗಳಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು: ವಿಹಿಂಪ
ಮೃತರು ತಮಿಳುನಾಡಿನ ಧರ್ಮಪುರಿ ಮೂಲದ ವೆಡಪ್ಪನ್, ರಾಘವನ್, ಆದಿಕೇಶವನ್, ಗಿರಿ, ಮುನಿವೇಲಂ, ಆಕಾಶ್, ಇಳಂಬರ್ದಿ ಹಾಗೂ ಪ್ರಕಾಶ್ ರಾಜ್ ಎಂದು ಗುರುತಿಸಲಾಗಿದೆ. ಇನ್ನೂ ನಾಲ್ವರ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹಳನ್ನೂ ಆಕ್ಸ್ಫರ್ಡ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಇತ್ತ ಪಟಾಕಿ ಗೋದಾಮು ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಮೃತದೇಹಗಳನ್ನು ತೋರಿಸಲು ಆಸ್ಪತ್ರೆ ಹಾಗೂ ಪೊಲೀಸ್ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಶನಿವಾರ ಮಧ್ಯಾಹ್ನ ದುರಂತ ನಡೆದಿದ್ದು, ಭಾನುವಾರ ಬೆಳಗ್ಗೆಯಾದರೂ ಮೃತದೇಹಗಳನ್ನು ತೋರಿಸಿಲ್ಲ. ಕಡೇ ಪಕ್ಷ ತಂದೆ-ತಾಯಿಯನ್ನಾದರೂ ಒಳಗೆ ಬಿಡಬೇಕು ಎಂದು ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ.