More

    ಮಲೆನಾಡಲ್ಲಿ ಒಂದೇ ದಿನ ಮಹಿಳೆ ಸೇರಿ ಇಬ್ಬರ ಕೊಲೆ

    ಶಿವಮೊಗ್ಗ: ಸೊರಬ ತಾಲೂಕಿನ ಆನವಟ್ಟಿ ಮತ್ತು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಠಾಣಾ ವ್ಯಾಪ್ತಿಯ ಪ್ರತ್ಯೇಕ ಪ್ರಕರಣದಲ್ಲಿ ಕೂಲಿ ಕಾರ್ಮಿಕ ಮಹಿಳೆ ಸೇರಿದಂತೆ ಇಬ್ಬರ ಹತ್ಯೆಯಾಗಿದ್ದು ಮಹಿಳೆ ಕೊಲೆ ಪ್ರಕರಣದ ಸಂಬಂಧ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
    ಆನವಟ್ಟಿ ಸಮೀಪದ ತಡುನೀರು ಗ್ರಾಮದ ಸಲೀಂ (25) ಮತ್ತು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಪಾರ್ವತಮ್ಮ (47) ಕೊಲೆಯಾದವರು. ಆನವಟ್ಟಿ ಹೋಬಳಿಯ ತಡುನೀರು ಗ್ರಾಮದಲ್ಲಿ ಸಲೀಂ ಮೃತದೇಹ ಪತ್ತೆಯಾಗಿದೆ. ಜಮೀನಿನ ಹೊರಭಾಗದಲ್ಲಿ ಕೊಲೆ ಮಾಡಿ ಆತನ ಜಮೀನಿನ ಬಳಿ ಬಿಸಾಡಲಾಗಿದೆ. ಗುರುವಾರ ಜಮೀನಿಗೆ ತೆರಳಿದ್ದ ಯುವಕನ ಶವ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
    ಸಲೀಂ ಬೆಳೆ ಕಾಯಲು ಎಂದಿನಂತೆ ತೆರಳಿದ್ದ. ಮೂರು ದಿನವಾದರೂ ಮನೆಗೆ ಬಂದಿರಲಿಲ್ಲ. ಮೊಬೈಲ್ ಕೂಡ ಸ್ವಿಚ್‌ಆಫ್ ಆಗಿತ್ತು. ಸಲೀಂ ತಲೆಗೆ ಹರಿತವಾದ ಆಯುಧಗಳಿಂದ ಹೊಡೆದ ಗಾಯದ ಗುರುತುಗಳಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
    ಸಲೀಂ ಕಬಡ್ಡಿ ಮತ್ತು ಹೋರಿ ಹಿಡಿಯುವುದರಲ್ಲಿ ಪರಿಣಿತನಾಗಿದ್ದ. ಮನೆ ಬಿಟ್ಟು ವಾರಾನುಗಟ್ಟಲೆ ಹೊರಗೆ ಇರುತ್ತಿದ್ದ. ಹಾಗಾಗಿ ಪಾಲಕರು ಪೊಲೀಸರಿಗೆ ದೂರು ನೀಡಿರಲಿಲ್ಲ ಎನ್ನಲಾಗಿದೆ. ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಆಳಿಯನಿಂದ ಮಹಿಳೆ ಕೊಲೆ ?
    ಮತ್ತೊಂದು ಪ್ರಕರಣದಲ್ಲಿ ಆಗುಂಬೆ ಸಮೀಪದ ಬಿದ್ರುಗೋಡು ಜಮೀನ್ದಾರ್ ಸಾವಿತ್ರಮ್ಮ ಅವರ ತೋಟದ ಬಾವಿಯಲ್ಲಿ ಪಾರ್ವತಮ್ಮ ಅವರ ಮೃತದೇಹ ಪತ್ತೆಯಾಗಿದೆ. ಕೆಲಸ ಮಾಡುತ್ತಿದ್ದ ಪಾರ್ವತಮ್ಮಳನ್ನು ಅವರ ಅಳಿಯನೇ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. ಹೊಳಲ್ಕೆರೆ ತಾಲೂಕಿನಿಂದ ಜಮೀನ್ದಾರ್ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಪಾರ್ವತಮ್ಮಳ ಮೃತದೇಹ ಪತ್ತೆಯಾಗಿದ್ದು ಈ ಸಂಬಂಧ ಪಾರ್ವತಮ್ಮಳ ಅಳಿಯನನ್ನೇ ಆಗುಂಬೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts