ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ನಿರ್ವಹಣೆ ತೋರಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ ಭಾರತ ತಂಡದ ಆರು ಯುವ ಕ್ರಿಕೆಟಿಗರಿಗೆ ಹೊಸ ಆವೃತ್ತಿಯ ಮಹೀಂದ್ರಾ ಥಾರ್-ಎಸ್ಯುವಿ ಉಡುಗೊರೆ ನೀಡುವುದಾಗಿ ಉದ್ಯಮಿ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ. ಆನಂದ್ ಮಹೀಂದ್ರಾ ಅವರು ಟ್ವಿಟರ್ನಲ್ಲಿ ಈ ಬಗ್ಗೆ ಪ್ರಕಟಿಸಿದ್ದಾರೆ. ಆಸೀಸ್ ವಿರುದ್ಧ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮೊಹಮದ್ ಸಿರಾಜ್, ಶುಭಮಾನ್ ಗಿಲ್, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಟಿ. ನಟರಾಜನ್ ಮತ್ತು ಸರಣಿಗೆ ಮುನ್ನ ಕೇವಲ 1 ಟೆಸ್ಟ್ ಆಡಿ 10 ಎಸೆತಗಳನ್ನಷ್ಟೇ ಎಸೆದಿದ್ದ ವೇಗಿ ಶಾರ್ದೂಲ್ ಠಾಕೂರ್ ವಿಶೇಷ ಉಡುಗೊರೆ ಪಡೆಯುತ್ತಿರುವ ಆರು ಕ್ರಿಕೆಟಿಗರಾಗಿದ್ದಾರೆ.
‘ಇವರೆಲ್ಲರ ಬೆಳವಣಿಗೆ ನಿಜಕ್ಕೂ ಅಮೋಘವಾದುದು. ಎಲ್ಲ ಅಡೆತಡೆಗಳನ್ನು ಮೀರಿ ಅವರು ಅದ್ಭುತ ನಿರ್ವಹಣೆ ತೋರಿದ್ದಾರೆ. ಅವರ ಎಲ್ಲರ ಜೀವನಕ್ಕೂ ಸ್ಫೂರ್ತಿ ತುಂಬಿದ್ದಾರೆ. ಈ ಆರು ಆಟಗಾರರು ಭಾರತದ ಯುವಕರಿಗೆ ಕನಸು ಕಾಣುವ ಮತ್ತು ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸ್ಫೂರ್ತಿ ತುಂಬಿದ್ದಾರೆ. ಅವರೆಲ್ಲರಿಗೂ ಹೊಸ ಥಾರ್ ಎಸ್ಯುವಿ ಉಡುಗೊರೆ ನೀಡುವುದು ನನಗೆ ವೈಯಕ್ತಿಕವಾಗಿ ಅತ್ಯುತ್ತಮ ಸಂತೋಷ ನೀಡುತ್ತಿದೆ. ಕಂಪನಿಯ ಹಣದಲ್ಲಲ್ಲ, ನನ್ನ ವೈಯಕ್ತಿಕ ಖಾತೆಯಿಂದ ಈ ಉಡುಗೊರೆಗಳನ್ನು ನೀಡಲಿದ್ದೇನೆ’ ಎಂದು ಮಹೀಂದ್ರಾ ಗ್ರೂಪ್ ಕಂಪನಿಯ ಚೇರ್ಮನ್ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಅದ್ದೂರಿ ಸ್ವಾಗತದ ಬಳಿಕ ಅಜಿಂಕ್ಯ ರಹಾನೆ ಕೇಕ್ ಕತ್ತರಿಸಲು ನಿರಾಕರಿಸಿದ್ದು ಯಾಕೆ ಗೊತ್ತೇ?
ಕಳೆದ ವರ್ಷ ಅಕ್ಟೋಬರ್ನಲ್ಲಿ ಅಧಿಕೃತವಾಗಿ ಅನಾವರಣಗೊಂಡಿರುವ ಹೊಸ ಮಹೀಂದ್ರಾ ಥಾರ್ 10ರಿಂದ 14.5 ಲಕ್ಷ ರೂ. ಮೌಲ್ಯದ ರೇಂಜ್ ಹೊಂದಿದೆ. ಈ ಮುನ್ನ ಬಿಸಿಸಿಐ, ಐತಿಹಾಸಿಕ ಸಾಧನೆ ತೋರಿದ ಭಾರತ ತಂಡದ ಎಲ್ಲ ಸದಸ್ಯರಿಗೆ ಒಟ್ಟು 5 ಕೋಟಿ ರೂ. ಬಹುಮಾನ ಪ್ರಕಟಿಸಿತ್ತು. ಮಹೀಂದ್ರಾ ಅವರು ಕ್ರೀಡಾಪಟುಗಳ ಸಾಧನೆಗೆ ಕಾರು ಉಡುಗೊರೆ ನೀಡುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಸೂಪರ್ ಸಿರೀಸ್ ಪ್ರಶಸ್ತಿ ಜಯಿಸಿದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರಿಗೆ ಟಿಯುವಿ 300 ಕಾರು ಉಡುಗೊರೆ ನೀಡಿದ್ದರು.
Theirs are true ‘Rise’ stories; overcoming daunting odds in the pursuit of excellence. They serve as an inspiration in all arenas of life. It gives me great personal pleasure to gift each of these debutants an All New THAR SUV on my own account—at no expense to the company. (2/3) pic.twitter.com/5aiHSbOAl1
— anand mahindra (@anandmahindra) January 23, 2021
ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಮೊಹಮದ್ ಸಿರಾಜ್ ಭಾರತ ಪರ ಗರಿಷ್ಠ 13 ವಿಕೆಟ್ ಕಬಳಿಸಿದ್ದರು. ಟಿ. ನಟರಾಜನ್ 1 ಟೆಸ್ಟ್ನಲ್ಲಿ 3 ವಿಕೆಟ್ ಕಬಳಿಸಿದ್ದಲ್ಲದೆ, ಪ್ರವಾಸದಲ್ಲಿ ಮೂರೂ ಪ್ರಕಾರದಲ್ಲಿ ಪದಾರ್ಪಣೆ ಮಾಡಿದ ವಿಶೇಷ ಸಾಧನೆ ಮಾಡಿದ್ದರು. ನವದೀಪ್ ಸೈನಿ ಗಾಯದ ನಡುವೆ 2 ಟೆಸ್ಟ್ ಆಡಿ 4 ವಿಕೆಟ್ ಪಡೆದಿದ್ದರು. ಶುಭಮಾನ್ ಗಿಲ್ 3 ಟೆಸ್ಟ್ಗಳಲ್ಲಿ 259 ರನ್ ಗಳಿಸಿದ್ದರು. ಶಾರ್ದೂಲ್ ಠಾಕೂರ್ (69 ರನ್, 7 ವಿಕೆಟ್) ಮತ್ತು ವಾಷಿಂಗ್ಟನ್ ಸುಂದರ್ (84 ರನ್, 4 ವಿಕೆಟ್) ಬ್ರಿಸ್ಬೇನ್ ಟೆಸ್ಟ್ನಲ್ಲಿ ಆಲ್ರೌಂಡ್ ನಿರ್ವಹಣೆಯಿಂದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.