ಬ್ಯಾಡಗಿ: ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸದಿದ್ದಲ್ಲಿ ಜು. 14ರಿಂದ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಆಶಾ ಕಾರ್ಯಕರ್ತೆಯರ ಸಂಘಟನೆ ತಾಲೂಕಾಧ್ಯಕ್ಷೆ ಮಂಜುಳಾ ಮಾಸೂರು ಎಚ್ಚರಿಸಿದ್ದಾರೆ.
ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ತೆರಳಿ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ಮಂಜುಳಾ, ವೇತನ ಹೆಚ್ಚಿಸುವುದು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾಕಷ್ಟು ಹೋರಾಟ ಮಾಡಿದ್ದೇವೆ. ನಿತ್ಯ ಸಂಕಷ್ಟದಲ್ಲಿ ಕಾರ್ಯನಿರ್ವಹಿಸುವ ನಮಗೆ ಆರೋಗ್ಯ ರಕ್ಷಣೆಗೆ ಯಾವುದೇ ಸಾಮಗ್ರಿಗಳನ್ನು ವಿತರಿಸುತ್ತಿಲ್ಲ. ಸ್ಯಾನಿಟೈಸರ್, ಕಿಟ್, ಮಾಸ್ಕ್ ಸಿಗುತ್ತಿಲ್ಲ. ಕರೊನಾ ಪಾಸಿಟಿವ್ ಇರುವವರ ಮನೆಗೆ ತೆರಳುವ ನಮಗೆ ರಕ್ಷಣೆ ಬೇಕಿದೆ. ಕೇವಲ ನಾಲ್ಕೈದು ಸಾವಿರ ವೇತನ ಪಡೆದು ಬದುಕು ಸಾಗಿಸುವ ನಾವು ಸಮಸ್ಯೆಯಲ್ಲಿ ಸಿಲುಕಿದ್ದೇವೆ. ತಿಂಗಳಿಗೊಮ್ಮೆ 3 ಸಾವಿರ ರೂ. ಬಾಡಿಗೆ ಕೊಡಬೇಕಿದೆ. ಇನ್ನುಳಿದ 2 ಸಾವಿರದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ, ಜೀವನ ನಿರ್ವಹಣೆ ತೀರಾ ಕಷ್ಟಕರ. ಕೂಡಲೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಕೆಲಸದಿಂದ ದೂರ ಉಳಿಯಲು ಎಲ್ಲರೂ ನಿರ್ಧರಿಸಿದ್ದೇವೆ. ಸೌಜನ್ಯಕ್ಕೂ ಮೆಲಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಗೋಳು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರಾದ ಭಾಗ್ಯಶ್ರೀ ಬೂದಿಹಾಳಮಠ, ರೇಖಾ ಕರಿಗಾರ, ಜ್ಯೋತಿ ಕಾರಗೇರ, ಸಾವಿತ್ರ ರಾಮಗೊಂಡನಹಳ್ಳಿ, ಜ್ಯೋತಿ ಶಿರಾಳಕೊಪ್ಪ, ಸಾವಿತ್ರ ಬೆನ್ನೂರು, ಜಯಮ್ಮ ಹಿರೇಮಠ, ರೇಣುಕಾ ಆಸಾದಿ, ಮಧು ಬಾಳಿಕಾಯಿ, ಯಶೋಧಾ ಕೋಡಿಹಳ್ಳಿ, ಸುಧಾ ಎಲಿ, ಬಸಿರಾ ನಾಶಿಪುಡಿ, ಗೀತಾ ಆಡಿನವರ ಇದ್ದರು.