ಕೋಟೇಶ್ವರ: ಕರೊನಾ ವೇಳೆ ಲಾಕ್ಡೌನ್ ಆದಾಗ ಯುವ ಮೆರಿಡಿಯನ್ ಅಮ್ಯೂಸ್ಮೆಂಟ್ ಪಾರ್ಕ್ ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳುವ ಜತೆಗೆ ಕೆಲಸಗಾರರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಂಡ ಕ್ರಮದಿಂದ ದೇಸಿ ಹಸುಗಳ ಸಾಕಣೆ, ಹದಿನೈದು ಎಕ್ರೆ ಭೂಮಿಯಲ್ಲಿ ಅಡಕೆ, ತೆಂಗು ತೋಟ ಸಾಕಾರಗೊಂಡಿದೆ.
ವಾಟರ್ ಫಾಲ್ಸ್ ಪಕ್ಕದಲ್ಲಿ ಗಿರ್, ಸಾಹಿಮಾಲ್ ಹಸುಗಳು, ಮೊಲ, ಬಾತುಕೋಳಿ, ಹಂಸ, ಪಾರಿವಾಳಗಳನ್ನು ಸಾಕಲಾಗಿದೆ. ಹಂಸ ಹಾಗೂ ಬಾತುಕೋಳಿಗಾಗಿ ಕೆರೆ ಸಿದ್ಧವಾಗುತ್ತಿದೆ. ಹಸುಗಳನ್ನು ಬೆಳಗ್ಗೆ ಹಟ್ಟಿಯಿಂದ ಬಿಟ್ಟರೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಟ್ಟಿ ಸೇರುತ್ತವೆ. ಇವುಗಳಿಗೆ ಇಲ್ಲಿನ ಗಾರ್ಡನ್ ಮೇಯಲು ಹುಲ್ಲುಗಾವಲು.
ಬೈಂದೂರು ಸಮೀಪದಲ್ಲಿ 15 ಎಕ್ರೆ ಪ್ರದೇಶದಲ್ಲಿ ಅಡಕೆ ಹಾಗೂ ತೆಂಗಿನ ತೋಟ ಮಾಡಲಾಗುತ್ತಿದೆ. ಜತೆಗೆ ಭತ್ತ ಕೂಡ ಬೆಳೆಯಲಾಗಿದ್ದು, ಅಮ್ಯೂಸ್ಮೆಂಟ್ ಪಾರ್ಕ್ಗೆ ಬರುವ ಮಕ್ಕಳಿಗೆ, ಹಸು, ಮೊಲ, ಹಂಸ ಬಾತುಕೋಳಿ ಸಾಕಣೆ ತಿಳಿವಳಿಕೆ ನೀಡುವ ಜತೆ ಬದುಕಿಗೆ ಹೇಗೆ ದಾರಿಯಾಗುತ್ತದೆ ಎನ್ನುವುದ ತಿಳಿಸುವ ಉದ್ದೇಶವಿದೆ ಎನ್ನುತ್ತಾರೆ ಆಡಳಿತ ನಿರ್ದೇಶಕ ಉದಯ ಕುಮಾರ್ ಶೆಟ್ಟಿ. ಒಟ್ಟಾರೆ ಯುವ ಮೆರಿಡಿಯನ್ ಲಾಕ್ಡೌನ್ ಹಿನ್ನೆಲೆಯಲ್ಲಿ ಕಂಡುಕೊಂಡ ಹೊಸ ಮಾರ್ಗ ಪರಿಸರದ ಜೀವಂತಿಕೆ ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಯುವ ಮೆರಿಡಿಯನ್ ಪ್ರವಾಸೋದ್ಯಮಕ್ಕೆ ತನ್ನದೆ ಕೊಡುಗೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಮೊದಲ ಹೆಲಿಪ್ಯಾಡ್ ಹೊಂದಿದೆ. ಟೆಲಿ ಟೂರಿಸಂ ಪರಿಚಯಿಸಿದ ಹೆಚ್ಚುಗಾರಿಕೆ ಸಂಸ್ಥೆಯದ್ದು.
ಲಾಕ್ಡೌನ್ ಹಿನ್ನೆಲೆಯಲ್ಲಿ ಯುವ ಮೆರಿಡಿಯನ್ಗೆ ಮಾಡಿದ ಹೂಡಿಕೆ, ಜತೆ ಕೆಲಸಗಾರರನ್ನು ಉಳಿಸಿಕೊಳ್ಳುವುದು ಸವಾಲಾಗಿತ್ತು. ಆಗ ಹಸು, ಮೊಲ, ಬಾತುಕೋಳಿ, ಹಂಸ ಪಾರಿವಾಳ ಸಾಕಣೆ, ಅಡಕೆ, ತೆಂಗು ಕೃಷಿ ಮಾಡಲಾಯಿತು. ಇದರಿಂದ ನಮ್ಮಲ್ಲಿರುವ ಕೆಲಸಗಾರರ ಉಳಿಸಿಕೊಳ್ಳಲಾಗಿದೆ. ಯುವ ಮೆರಿಡಿಯನ್ನಲ್ಲಿರುವ ಯಂತ್ರೋಪಕರಣಗಳು ಸುಸ್ಥಿತಿಯಲ್ಲಿಟ್ಟುಕೊಳ್ಳದಿದ್ದರೆ ಅವುಗಳು ಹಾಳಾಗುವ ಸಾಧ್ಯತೆಯಿತ್ತು.
ಉದಯ ಕುಮಾರ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ ಆಡಳಿತ ನಿರ್ದೇಶಕರು ಯುವ ಮೆರಿಡಿಯನ್ ಕೋಟೇಶ್ವರ