More

    ಮಾ.4ರಿಂದ ಗಿರಿಯಾಪುರದಲ್ಲಿ ಶಿವಾನುಭವ ಸಮ್ಮೇಳನ

    ಕಡೂರು: ಗಿರಿಯಾಪುರದಲ್ಲಿ 75ನೇ ವರ್ಷದ ಶಿವಾನುಭವ ಸಮ್ಮೇಳನವನ್ನು ಮಾ.4 ರಿಂದ 6ರ ವರೆಗೆ ಏರ್ಪಡಿಸಲಾಗಿದೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಜಿ.ಸಿ.ಶಿವಲಿಂಗಪ್ಪ ತಿಳಿಸಿದರು.
    ಹಾನಗಲ್ಲ ಕುಮಾರ ಶಿವಯೋಗಿಗಳ ಸ್ಮರಣೆಯಲ್ಲಿ ಅವರ ಶಿಷ್ಯರಾದ ಸದಾಶಿವ ಶಿವಾಚಾರ್ಯ ಸ್ವಾಮೀಜಿ 75 ವರ್ಷಗಳ ಹಿಂದೆ ಗಿರಿಯಾಪುರದಲ್ಲಿ ಶಿವಾದ್ವೈತ ತತ್ವಪ್ರಸಾರ ಕೇಂದ್ರ ಆರಂಭಿಸಿ ಶಿವಾನುಭವ ಸಮ್ಮೇಳನ ಆರಂಭಿಸಿದರು. ಈಗ ನಡೆಯಲಿರುವ ಸಮ್ಮೇಳನ ಸದಾಶಿವ ಶಿವಾಚಾರ್ಯರ 50ನೇ ವರ್ಷದ ಲಿಂಗೈಕ್ಯ ಸಂಸ್ಮರಣೆಯೂ ಆಗಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
    ಮಾ.4ರಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ಅಮೃತಮಹೋತ್ಸವ ಭವನ ಮತ್ತು ಸಭಾಭವನವನ್ನು ನಾಡೋಜ ಗೊ.ರು.ಚೆನ್ನಬಸಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಉದ್ಘಾಟಿಸುವರು. ಕುಂದೂರು ಮಠದ ಡಾ. ಶರತ್‌ಚಂದ್ರ ಸ್ವಾಮೀಜಿ ‘ವಿಭೂತಿ’ ಗ್ರಂಥ ಬಿಡುಗಡೆಗೊಳಿಸುವರು. ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಹಾನಗಲ್ಲ ಕುಮಾರ ಶಿವಯೋಗಿಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
    ಮಾ.5 ರಂದು ಎರಡು ಚಿಂತನಗೋಷ್ಠಿಗಳು ನಡೆಯಲಿವೆ. ಅಂದು ಸಂಜೆ ವಿರಾಟಪುರದ ವಿರಾಗಿ ಚಲನಚಿತ್ರ ಪ್ರದರ್ಶನವಿದೆ. ಮಾ.6ರಂದು ಚಿಂತನಗೋಷ್ಠಿ ನಡೆಯಲಿದ್ದು ಮಧ್ಯಾಹ್ನ ಸಮಾರೋಪ ಜರುಗಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆನಂದಪುರ ಮುರುಘರಾಜೇಂದ್ರ ಮಠದ ಶ್ರೀಗಳು ಹಾಗೂ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್ ಸಮಾರೋಪ ನುಡಿಗಳನ್ನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
    ಸಮಿತಿ ಕಾರ್ಯದರ್ಶಿ ಗುರುಶಾಂತಪ್ಪ ಮಾತನಾಡಿ, ಸಮ್ಮೇಳನದಲ್ಲಿ ನಾಡಿನ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಹಲವು ಚಿಂತಕರು ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಲಿದ್ದಾರೆ. ಸಾಧಕರನ್ನು ಗೌರವಿಸಲಾಗುವುದು. ಸಮ್ಮೇಳನದ ಯಶಸ್ಸಿಗಾಗಿ ಆಚರಣಾ ಸಮಿತಿ ರಚಿಸಲಾಗಿದ್ದು ಶಾಸಕ ಕೆ.ಎಸ್.ಆನಂದ್ ಸಮಿತಿ ಗೌರವಾಧ್ಯಕ್ಷರಾಗಿದ್ದಾರೆ. ಸಮ್ಮೇಳನಕ್ಕೆ ಆಗಮಿಸುವವರಿಗೆ ವಸತಿ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
    ಆಚರಣಾ ಸಮಿತಿ ಸದಸ್ಯರಾದ ಜಿ.ಎಂ.ಪ್ರಸಾದ್, ಜಿ.ಎಂ.ನೀಲಲೋಚನಸ್ವಾಮಿ, ಗ್ರಾಪಂ ಸದಸ್ಯ ಉಮಾಮಹೇಶ್ವರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts