ವಾರಾಣಸಿ: ‘ಆಸೆಯೇ ದುಃಖಕ್ಕೆ ಮೂಲ’ ಎಂದಾಕ್ಷಣ ಎಲ್ಲರ ಮನಸ್ಸಲ್ಲೂ ಒಮ್ಮೆ ಬುದ್ಧನ ನೆನಪಾಗಿ ಬಿಡುತ್ತದೆ. ನಿಜ.. ಇದು ಬುದ್ಧನ ಮಾತೇ ಆಗಿದ್ದರೂ ಸದ್ಯದಲ್ಲೇ ಇದು ಬಿಗ್-ಬಿ ಅಮಿತಾಭ್ ಬಚ್ಚನ್ ಬಾಯಿಂದ ಹೊರಹೊಮ್ಮಿದರೂ ಅಚ್ಚರಿ ಏನಿಲ್ಲ.
ಏಕೆಂದರೆ ಬುದ್ಧನ ಹಲವು ಸಂದೇಶ, ಆತನ ಬದುಕು ಎಲ್ಲದಕ್ಕೂ ಬಿಗ್-ಬಿ ಶೀಘ್ರದಲ್ಲೇ ದನಿ ಆಗಲಿದ್ದಾರೆ. ಅರ್ಥಾತ್, ಬುದ್ಧನ ಸಂದೇಶಗಳು ಹಾಗೂ ಬದುಕನ್ನು ಆಧರಿಸಿ ನಡೆಯುವ ಧ್ವನಿ-ಬೆಳಕಿನ ಪ್ರದರ್ಶನಕ್ಕೆ ಅಮಿತಾಭ್ ಬಚ್ಚನ್ ಧ್ವನಿ ನೀಡಲಿದ್ದಾರೆ. ಭಗವಾನ್ ಬುದ್ಧನ ಕುರಿತು ಇಂಥದ್ದೊಂದು ಲೈಟ್ ಆ್ಯಂಡ್ ಸೌಂಡ್ ಶೋ ಉತ್ತರಪ್ರದೇಶದ ಸಾರನಾಥ್ನಲ್ಲಿ ಶೀಘ್ರದಲ್ಲೇ ಆಯೋಜನೆ ಆಗಲಿದೆ.
ಈಗಾಗಲೇ ಮಾಡಿಕೊಂಡಿದ್ದ ಯೋಜನೆ ಪ್ರಕಾರ ಇದಕ್ಕೆ ಬಿಗ್-ಬಿ ಸೆಪ್ಟೆಂಬರ್ ತಿಂಗಳಾಂತ್ಯದೊಳಗೆ ಡಬ್ಬಿಂಗ್ ಮಾಡಿ ಮುಗಿಸಿರಬೇಕಿತ್ತು. ಆದರೆ ಅವರಿಗೆ ಕರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಅಕ್ಟೋಬರ್ 25ರ ಒಳಗೆ ರೆಕಾರ್ಡಿಂಗ್ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಲೈಟ್ ಆ್ಯಂಡ್ ಸೌಂಡ್ ಶೋ ಈ ವರ್ಷದ ಕೊನೆಯಲ್ಲಿ ಆರಂಭಗೊಳ್ಳುವಂತೆ ತಯಾರಿಗಳು ನಡೆಯುತ್ತಿವೆ. ಬುದ್ಧನ ಬಾಲ್ಯದಿಂದ ಹಿಡಿದು ಪರಿನಿರ್ವಾಣದ ವರೆಗಿನ ಬದುಕು ಇದರಲ್ಲಿ ಅನಾವರಣ ಆಗಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)