ಬೆಂಗಳೂರು: ಯಾವುದೇ ಆಸೆ-ಆಮಿಷವೊಡ್ಡಿ ಸೇರ್ಪಡೆ ಮಾಡಿಕೊಳ್ಳುವುದು ಬಿಜೆಪಿ ಜಾಯಮಾನವಲ್ಲ. ಸಮಾಜ ಸೇವೆ, ಸ್ವಾರ್ಥರಹಿತವಾಗಿ ಸಂಘಟನಾ ಚಟುವಟಿಕೆಗಳಿಗೆ ತೊಡಗಿಕೊಳ್ಳುವುದು ಪಕ್ಷದ ಪ್ರಧಾನ ವಿಚಾರಧಾರೆ. ರಾಜಕೀಯ ಅಧಿಕಾರಕ್ಕಿಂತ ಜನಸೇವೆಯೇ ಬಿಜೆಪಿಗೆ ಮುಖ್ಯವಾಗಿದೆ ಎಂದು ಪಕ್ಷದ ಲೋಕಸಭಾ ಚುನಾವಣೆ ರಾಜ್ಯ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿದರು.
ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಮೈಸೂರಿನ ಹೆಸರಾಂತ ವೈದ್ಯ ಡಾ.ಸುಶ್ರುತಗೌಡ ಅವರನ್ನು ಬುಧವಾರ ಪಕ್ಷಕ್ಕೆ ಬರ ಮಾಡಿಕೊಂಡ ನಂತರ ಮಾತನಾಡಿದ ಅವರು, ಸ್ವತಃ ವೈದ್ಯನಾಗಿ ಜನ ಸೇವೆಯ ಅಪೇಕ್ಷೆ ಅರಿತಿದ್ದೇನೆ. ಬಿಜೆಪಿ ವಿಚಾರಧಾರೆಗೆ ಅನುಗುಣವಾಗಿ ನರೇಂದ್ರ ಮೋದಿ ಆಡಳಿತ ಸಾಗುತ್ತಿದೆ. ಜನಜೀವನಮಟ್ಟ ಸುಧಾರಣೆಯೊಂದಿಗೆ ದೇಶದ ಅಭಿವೃದ್ಧಿ ಸಾಧ್ಯವೆಂದು ಅರಿತಿದ್ದಾರೆ. ದಶಕದ ಸಾಧನೆಯು ಕೈಗನ್ನಡಿಯಾಗಿದೆ ಎಂದರು.
ಮೈಸೂರಿನ ಡಾ.ಸುಶ್ರುತ ಗೌಡ ಆರೋಗ್ಯ ಕ್ಷೇತ್ರದಲ್ಲಿ ಸೇವೆ, ಸುಧಾರಣೆ ಬಯಸಿ ಕಾಂಗ್ರೆಸ್ ನ ಜೋಡೊ ಯಾತ್ರೆಗೆ ಕೈ ಜೋಡಿಸಿದರು. ಐದೂವರೆ ತಿಂಗಳ ಕಾಲ ಜತೆಯಾಗಿ ಹೆಜ್ಜೆ ಹಾಕಿದ ಅವರಿಗೆ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ, ನಾಯಕರ ಮನಸ್ಥಿತಿ ಅರ್ಥವಾಯಿತು. ಯಾವುದೇ ರೀತಿಯಲ್ಲಿ ತಮ್ಮ ವಿಚಾರಕ್ಕೆ ಹೊಂದುವುದಿಲ್ಲ ತಿಳಿದರು. ಮೋದಿಯವರ ಕಾಳಜಿ, ಪರಿಶ್ರಮವೇ ಅನುಕರಣೀಯ. ಜನರಿಗೆ ಸೇವೆ ಸಲ್ಲಿಕೆ ಬಯಸಿ ಬಿಜೆಪಿಗೆ ಬೇಷರತ್ ಸೇರ್ಪಡೆಯಾಗಿದ್ದಾರೆ ಎಂದು ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿದರು.
ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ ಭರವಸೆಯಿಲ್ಲದ, ದೂರದೃಷ್ಟಿ, ಜನಪರ ಕಾಳಜಿಯಿಲ್ಲದ ಕಾಂಗ್ರೆಸ್ ಪಕ್ಷವೆಂದು ಡಾ.ಸುಶ್ರುತ ಗೌಡ ಹೊರ ಬಂದು, ಬಿಜೆಪಿ ಸೇರಿದ್ದಾರೆ. ಮೈಸೂರು ಜತೆಗೆ ಪ್ರಾಂತದ ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರೆ, ಪಕ್ಷದ ಸಿದ್ಧಾಂತ ಮೆಚ್ಚಿ, ಮೋದಿ ಕೆಲಸ ಒಪ್ಪಿ ಬಿಜೆಪಿಗೆ ಬೇಷರತ್ತಾಗಿ ಸೇರಿರುವೆ ಎಂದು ಡಾ.ಸುಶ್ರುತ ಗೌಡ ತಿಳಿಸಿದರು.