ಎನ್.ಆರ್.ಪುರ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜಯಂತಿಯನ್ನು ಏ.14 ರಂದು ಸರಳವಾಗಿ ತಾಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಎಂ.ಎಸ್.ರಮೇಶ್ ಹೇಳಿದರು.
ಶನಿವಾರ ತಾಲೂಕು ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜಯಂತಿ ಆಚರಿಸುವ ಕುರಿತು ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಂಜುನಾಥ್ ಮಾತನಾಡಿ, ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಡಾ.ಅಂಬೇಡ್ಕರ್ ಜಯಂತಿ ಸಮಾರಂಭಕ್ಕೆ ಹಾಜರಾಗಬೇಕು. ಗೈರು ಹಾಜರಾದರೆ ಅಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗುವುದು ಎಂದರು. 20 ವರ್ಷಗಳಿಂದ ಡಾ.ಅಂಬೇಡ್ಕರ್ ಜಯಂತಿಗೆ 5 ಸಾವಿರ ರೂ. ಅನುದಾನ ಮಾತ್ರ ಬರುತ್ತಿದೆ. ಇದನ್ನು ಕನಿಷ್ಠ 50 ಸಾವಿರ ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿ ನಿರ್ಣಯ ಕೈಗೊಳ್ಳೋಣ ಎಂದರು.
ಏ.14 ರಂದು ತಾಲೂಕು ಕಚೇರಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಜಯಂತಿ ಬೆಳಗ್ಗೆ 9.30 ಗಂಟೆಯಿಂದ 10.30 ಗಂಟೆಯವರೆಗೆ ಆಚರಿಸಲು ಸಭೆ ತೀರ್ಮಾನಿಸಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಧನಂಜಯ ಅವರನ್ನು ಉಪನ್ಯಾಸ ಮಾಡಲು ಆಹ್ವಾನಿಸಲು ಸಭೆ ತೀರ್ಮಾನಿಸಿತು.
ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ನಿರಂಜನಮೂರ್ತಿ, ಗೌಸ್ಮಹಿಯುದ್ದೀನ್, ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಡಾ.ವಿಜಯಕುಮಾರ್, ದರ್ಶನ್, ಮಂಜುನಾಥ್, ಡಿ.ರಾಮ, ಶ್ರೀನಾಥ್, ಜಯರಾಂ, ಚಂದ್ರು, ಭವಾನಿ, ನಾಗರಾಜ್ ಇದ್ದರು.