ಉತ್ತರಕನ್ನಡ: ಸಚಿವದ್ವಯರ ಎದುರೇ ಶಾಸಕರಿಬ್ಬರು ಅನುದಾನದ ವಿಚಾರವಾಗಿ ಜಟಾಪಟಿಗೆ ಇಳಿದ ಪ್ರಕರಣ ನಡೆದಿದೆ. ಸಚಿವ ಕೆ.ಶಿವರಾಮ ಹೆಬ್ಬಾರ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆ ವೇಳೆ ಈ ವಾಕ್ಸಮರ ಉಂಟಾಗಿದೆ. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ದಿನಕರ ಶೆಟ್ಟಿ ಹಾಗೂ ಕಾರವಾರ ಶಾಸಕಿ ರೂಪಾಲಿ ನಾಯ್ಕ ವಾಗ್ವಾದ ಮಾಡಿಕೊಂಡ ಜನಪ್ರತಿನಿಧಿಗಳು.
ನೆರೆ ಪರಿಹಾರ ಅನುದಾನ ಹಂಚಿಕೆಯಲ್ಲಿನ ವ್ಯತ್ಯಾಸವೇ ಈ ವಾಗ್ವಾದಕ್ಕೆ ಕಾರಣವಾಗಿದೆ. ತಮ್ಮ ಕ್ಷೇತ್ರವಾದ ಕಾರವಾರಕ್ಕೆ ಕಡಿಮೆ ಅನುದಾನ ದೊರಕಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಕರಾರು ತೆಗೆದಿದ್ದರು. ತೌಕ್ತೆ ಚಂಡಮಾರುತ ಸಂದರ್ಭದಲ್ಲಿ ಕಾರವಾರದಲ್ಲಿ ಸಾಕಷ್ಟು ಹಾನಿಯಾಗಿದೆ. ಆದರೆ ಕುಮಟಾಗೆ ಮಾತ್ರ ಹೆಚ್ಚಿನ ಅನುದಾನ ನೀಡಲಾಗಿದೆ, ಕಾರವಾರಕ್ಕೂ ಹೆಚ್ಚಿನ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ: ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು, ಹಲವರಿಗೆ ಗಾಯ…
ಈ ವೇಳೆ ಕೋಪಗೊಂಡ ಕುಮಟಾ ಶಾಸಕ ದಿನಕರ ಶೆಟ್ಟಿ, ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಬೇಡಿ ಗದರಿದರು. ನೀವು ಮಹಿಳೆಯಾಗಿ ಹಾಗೆಲ್ಲ ಮಾತನಾಡಬಾರದು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಆಗ ಸಚಿವ ಶಿವರಾಮ ಹೆಬ್ಬಾರ್, ಹಾಗೆಲ್ಲ ಮಾತನಾಡಬೇಡಿ, ಅದನ್ನೆಲ್ಲ ಮಾತನಾಡಲು ಹೊರಗೆ ಐಬಿ ಇದೆ, ಅಲ್ಲಿ ಮಾತನಾಡಿ ಎಂದರು. ಆಗ ರೂಪಾಲಿ ನಾಯ್ಕ, ನಾನು ಜಗಳ ಆಡುತ್ತಿಲ್ಲ, 100 ಕೋಟಿ ರೂ. ನೆರೆ ಪರಿಹಾರ ಧನ ಬಂದಿದ್ದರೂ ನನ್ನ ಕ್ಷೇತ್ರಕ್ಕೆ ಸಿಕ್ಕಿದ್ದು ಬರೀ 5 ಕೋಟಿ ರೂ. ಎಂದು ಬೇಸರ ವ್ಯಕ್ತಪಡಿಸಿದರು.
‘ಬೆಳಗಾವಿ ಕರ್ನಾಟಕದ್ದೇ, ಇಲ್ಲಿಯ ಮೂಲಭಾಷೆ ಕನ್ನಡವೇ’: ಸಿಕ್ಕಿದೆ ಬ್ರಿಟಿಷರ ಕಾಲದ ಮತ್ತೊಂದು ಮಹತ್ವದ ಕನ್ನಡ ದಾಖಲೆ