ವಿಜಯಪುರ: ಯಾವುದಾದರೂ ಒಂದು ಅಪರಾಧ ಪ್ರಕರಣವನ್ನು ಒಬ್ಬಿಬ್ಬರು ಪೊಲೀಸರು ಅಥವಾ ಹತ್ತಾರು ಪೊಲೀಸರ ಒಂದು ತಂಡ ಬೆನ್ನು ಹತ್ತುವುದು ಸಾಮಾನ್ಯ. ಆದರೆ ಅಪರೂಪಕ್ಕೆಂಬಂತೆ ಇಲ್ಲೊಂದು ಪ್ರಕರಣದ ಹಿಂದೆ ಬರೋಬ್ಬರಿ ಒಂದೂವರೆ ಸಾವಿರ ಪೊಲೀಸರು ಬೆನ್ನುಬಿದ್ದಿದ್ದಾರೆ.
ಹೌದು.. ಈ ಅಪರಾಧ ಪ್ರಕರಣದ ಪತ್ತೆಗಾಗಿ ಒಬ್ಬರು ಎಸ್ಪಿ, ಇನ್ನೊಬ್ಬರು ಹೆಚ್ಚುವರಿ ಎಸ್ಪಿ, ಅವರೊಂದಿಗೆ 37 ಇನ್ಸ್ಪೆಕ್ಟರ್ಗಳು ನೇತೃತ್ವದ ಹತ್ತಕ್ಕೂ ಅಧಿಕ ತಂಡಗಳ ರಚನೆಯಾಗಿದ್ದು, ಒಟ್ಟು ಒಂದೂವರೆ ಸಾವಿರ ಪೊಲೀಸರು ಇದೊಂದೇ ಪ್ರಕರಣದ ತನಿಖಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಂದಹಾಗೆ ಇದು ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣ. ಈ ಪ್ರಕರಣದ ತನಿಖೆಗಾಗಿ ವಿಜಯಪುರ ಜಿಲ್ಲೆಯ 1500 ಪೊಲೀಸರನ್ನು ನಿಯೋಜಿಸಲಾಗಿದೆ.
ಘಟನೆ ನಡೆದ ಸ್ಥಳದ ಸುತ್ತಲೂ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪೊಲೀಸರಿಂದ ಶೋಧ ನಡೆಯುತ್ತಿದ್ದು, ಭೀಮಾತೀರದ ಚಡಚಣ, ಕೆರೂರ, ಟಾಕಳಿ, ಉಮರಾಣಿ, ಲೋಣಿ, ಕೊಂಕಣಗಾಂವ ಸುತ್ತಲೂ ಪೊಲೀಸರ ತಂಡ 24×7 ಗಸ್ತಿನಲ್ಲಿದೆ. ಅಲ್ಲದೆ ಐಜಿಪಿ ರಾಘವೇಂದ್ರ ಸುಹಾಸ್ ಭೇಟಿ ಬಳಿಕ ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಬಾಂಬ್ ಪತ್ತೆ ನಿಷ್ಕ್ರಿಯದಳ ಪರಿಶೀಲನೆಯನ್ನೂ ನಡೆಸಿದೆ.
ಭೀಕರ ದಾಳಿ ವೇಳೆ 18 ರೌಂಡ್ಗಳಲ್ಲಿ ಫೈರಿಂಗ್ ನಡೆದಿದ್ದು, ಈ ವರೆಗೆ ಸ್ಥಳದಲ್ಲಿ 15 ಬುಲೆಟ್ ಕ್ಯಾಪ್ ಹಾಗೂ 3 ಜೀವಂತ ಗುಂಡು, 10ಕ್ಕೂ ಅಧಿಕ ಪೆಟ್ರೋಲ್ ಬಾಂಬ್, ಹೊಸದಾಗಿ ರೆಡಿ ಮಾಡಿಸಿದ್ದ ತಲವಾರ್ಗಳು ಪತ್ತೆ ಆಗಿವೆ.
ಈ ದಾಳಿಗೆ ಬಿಹಾರದ ಮುಂಗರ್ ಜಿಲ್ಲೆಯ ಕಂಟ್ರಿಮೇಡ್ ಪಿಸ್ತೂಲ್ ಬಳಕೆಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ಪೊಲೀಸರಲ್ಲಿ ಮೂಡಿದೆ. ಈ ದಾಳಿಯಲ್ಲಿ ಮಹಾದೇವ ಬೈರಗೊಂಡ ಕಡೆಯ ಇಬ್ಬರು ಸಾವಿಗೀಡಾಗಿದ್ದರು. ಅಟ್ಯಾಕ್ ಮಾಡಿದವರು ಮಹಾರಾಷ್ಟ್ರದ ಪೂನಾ, ನಾಂದೆಡ್, ಯು.ಪಿ, ಬಿಹಾರ ಕಡೆಗೆ ಪರಾರಿಯಾಗಿರುವ ಸಾಧ್ಯತೆ ಇದ್ದು, ಎಲ್ಲ ನಿಟ್ಟಿನಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.