ಆಲಮೇಲ: ಸೋಮವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ನಾಗರಳ್ಳಿ, ಗುಂದಗಿ, ಬಳಗಾನೂರ, ವಿಭೂತಿಹಳ್ಳಿ ಸೇರಿ ವಿವಿಧೆಡೆ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು, ರೈತರು ತೀವ್ರ ಕಂಗಾಲಾಗಿದ್ದಾರೆ.
ಸೋಮವಾರ ಸುರಿದ ಮಳೆಯಿಂದ ನೂರಾರು ಎಕ್ಕರೆ ಕಬ್ಬು, ಮೆಣಸಿನ ಗಿಡ, ಹತ್ತಿ, ತೊಗರಿ ಜಲಾವೃತಗೊಂಡಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಕುಸಿದು ಬಿದ್ದ ಮನೆಗಳು
ಭಾರೀ ಮಳೆಯಿಂದಾಗಿ ತಾವರಖೇಡದಲ್ಲಿ 11, ತಾರಾಪುರ 5, ಮದನಳ್ಳಿ 6, ಆಲಮೇಲ 2 ಸೇರಿ ಅಂದಾಜು 25 ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಜನತೆ ರಾತ್ರಿವಿಡೀ ನಿದ್ದೆ ಮಾಡದೆ ಕೂಡುವಂತಾಗಿದೆ. ಬೆಳೆ ಕಳೆದುಕೊಂಡು ನಷ್ಟದಲ್ಲಿದ್ದ ಜನರಿಗೆ ಈಗ ಮನೆ ನಿರ್ಮಾಣವೂ ಬಹುದೊಡ್ಡ ಸವಾಲಾಗಿದೆ.
ನೆಲಕ್ಕೆ ಬಿದ್ದ ಕಬ್ಬು, ಪರಿಹಾರಕ್ಕೆ ರೈತರ ಆಗ್ರಹ:
ಈ ಭಾಗದಲ್ಲಿ 100 ಎಕ್ಕರೆಯಷ್ಟು ರೈತರ ಜಮೀನುದಲ್ಲಿನ ಕಟಾವಿಗೆ ಬಂದ ಕಬ್ಬು ನೆಲಕ್ಕುರುಳಿದೆ. ಇನ್ನೂ ಎರಡು ತಿಂಗಳವರೆಗೆ ಯಾವುದೇ ಕಬ್ಬಿ ಸಾಗಿಸುವ ಗಾಡಿಗಳು ಹೋಗುವಂತಿಲ್ಲ. ನಮಗೆ ಕಬ್ಬು ಬೆಳೆಯೇ ಆಧಾರವಾಗಿತ್ತು. ಈ ಭಾಗದಲ್ಲಿ ಕಬ್ಬು ನಂಬಿಕೊಂಡು ಬದಕುವ ರೈತರಿಗೆ ಇದು ಅಪಾರ ಹಾನಿ ಮಾಡಿದೆ. ಸರ್ಕಾರ ಕೂಡಲೇ ಬೆಳೆಗಾರರಿಗೆ ನೆರವು ನೀಡಬೇಕೆಂದು ಕಬ್ಬು ಬೆಳೆಗಾರ ಚಂದ್ರಶೇಖರ ಕರೋಟಿ ಆಗ್ರಹಿಸಿದ್ದಾರೆ.
ಜಲಾವೃತಗೊಂಡ ದೇವಾಲಯ
ಪಟ್ಟಣದಲ್ಲಿ ಸುರಿದ ಮಳೆಯಿಂದ ವಿಶ್ವೇಶ್ವರ ದೇವಾಲಯಕ್ಕೆ ಮಳೆಯ ನೀರು ನುಗಿ ದೇವಾಲಯ ಜಲಾವೃತ್ತವಾಗಿದೆ. ಅಲ್ಲದೆ, ದೇವಾಲಯ ಆವರಣದಲ್ಲಿನ ಪೂಜಾರಿ ಅವರ ಮನೆಗಳಿಗೂ ನೀರು ನುಗ್ಗಿದೆ.