ವಿಜಯಪುರ: ಅಲಿಯಾಬಾದ್ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಲೆ ಮೇಲೆ ಕಲ್ಲು ಹೊತ್ತುಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಅಲಿಯಾಬಾದ್ ಗ್ರಾಮ ಪಂಚಾಯಿತಿಯಲ್ಲಿ ವಾಟರ್ಮನ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಸಂಬಳವನ್ನು ಒಂದು ವರ್ಷದಿಂದಲೂ ತಡೆ ಹಿಡಿದಿರುವ ಅಲ್ಲಿನ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2007-08 ನೇ ಸಾಲಿನಿಂದ ಗ್ರಾಮ ಪಂಚಾಯಿತಿಯಲ್ಲಿ ಗಣಪತಿ ಶಿವಾಜಿ ತರಸೆ ವಾಟರ್ಮನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ. ವೇತನ ಪಾವತಿಸದೆ ಅಲ್ಲಿನ ಪಿಡಿಒ ಸತಾಯಿಸುತ್ತಿದ್ದಾರೆ. ಅಲ್ಲದೆ, ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ 9 ತಿಂಗಳಿಂದ ವೇತನ ನೀಡಿಲ್ಲ. ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಶೀಘ್ರ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.
ಅಣ್ಣಾರಾಯ ತರಸೆ, ಶ್ರೀಶೈಲ ಧನವಾಡ, ಸಂತೋಷ ಧನವಾಡ, ಉಮೇಶ ಧನವಾಡ, ಕೃಷ್ಣಾ ಧನವಾಡ, ಸಂಜೋಗ ಶಿಂಧೆ, ಗಣಪತಿ ಸಾವಂತ, ಲಕ್ಷ್ಮ್ಮೀ ತರಸೆ, ಜಾಂಗದೇವ ದೇವಕರ, ದಗಡು ಧನವಾಡ, ಹರಿ ಘಾಟಗೆ, ಶ್ರೀಶೈಲ ಹುಣಶ್ಯಾಳ ಮುಂತಾದವರು ಉಪಸ್ಥಿತರಿದ್ದರು.