ಕಳಸ: ಮದ್ಯವರ್ಜನ ಶಿಬಿರ ಕುಟುಂಬ ಕಟ್ಟುವ ಕಾರ್ಯಕ್ರಮ. ಹೆಣ್ಣು ಮಕ್ಕಳ ಕಣ್ಣೀರು ಒರೆಸುವ ಪವಿತ್ರ ಕಾರ್ಯ ಎಂದು ಜನಜಾಗೃತಿ ವೇದಿಕೆ ಚಿತ್ರದುರ್ಗ ಪ್ರಾದೇಶಿಕ ಯೋಜನಾಧಿಕಾರಿ ನಾಗರಾಜ್ ಹೇಳಿದರು.
ಬುಧವಾರ ಏರ್ಪಡಿಸಿದ್ದ ಜೂನ್ನಲ್ಲಿ ನಡೆಯಲಿರುವ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ದುಡಿಯುವ ವರ್ಗದ ಶತ್ರು. ವ್ಯಸನಿಯ ಕುಟುಂಬ ರಕ್ಷಣೆ ಮತ್ತು ದೇವಸ್ಥಾನದ ಜೀರ್ಣೋದ್ಧಾರ ಮಾಡುವುದು ಒಂದೇ. ಇದು ಪುಣ್ಯದ ಕಾರ್ಯಕ್ರಮ ಎಂದರು.
ಇತ್ತೀಚಿನ ದಿನಗಳಲ್ಲಿ ಮದ್ಯ ವ್ಯಸನಿಗಳಿಂದ ಸಮಾಜದಲ್ಲಿ ದುರಂತಗಳು ನಡೆಯುತ್ತಿವೆ. ಕುಟುಂಬ ಮತ್ತು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಾಮಾಜಿಕ ಸಮಸ್ಯೆ ಆದ ಕಾರಣ ಸಮಾಜದ ಎಲ್ಲ ಗೌರವಾನ್ವಿತರೂ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಯೋಜನಾಧಿಕಾರಿ ಸುರೇಶ್, ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಬಿ.ಕೆ.ಮಹೇಶ್, ಮಾಸ್ಟರ್ ಅಜಿತ್, ಶೌರ್ಯ ಸ್ವಯಂ ಸೇವಕರು, ನವಜೀವನ ಸದಸ್ಯರು, ಒಕ್ಕೂಟದ ಸದಸ್ಯರು, ಮೇಲ್ವಿಚಾರಕರು, ಆರೋಗ್ಯ ಸಹಾಯಕರು, ನವಜೀವನ ಪೋಷಕ ಸೇವಾ ಪ್ರತಿನಿಧಿಗಳು ಇದ್ದರು.
ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಗೌರವ ಅಧ್ಯಕ್ಷರಾಗಿ ವೆಂಕಟಸುಬ್ಬಯ್ಯ ಅವರನ್ನು ನೇಮಕ ಮಾಡಲಾಯಿತು. ಕೆ.ಸಿ. ಧರಣೇಂದ್ರ(ಅಧ್ಯಕ್ಷ), ರಂಗನಾಥ್ ಭಟ್, ಶ್ರೀಧರ್ ಶೆಟ್ಟಿ, ರುದ್ರಯ್ಯ ಆಚಾರ್, ಪ್ರವೀಣ್ ಜೈನ್ ಬಲಿಗೆ, ಉಷಾ ವಿಶ್ವನಾಥ್, ಎಂ.ಎ. ಶೇಷಗಿರಿ, ಕೆ.ಕೆ.ಬಾಲಕೃಷ್ಣ ಭಟ್, ರಂಗನಾಥ್, ಆಶಾಲತಾ ಜೈನ್ (ಉಪಾಧ್ಯಕ್ಷರು), ಸುಜಯಾ ಸದಾನಂದ, ಬ್ರಹ್ಮದೇವ, ಕೀರ್ತಿ ಜೈನ್, ಗಜೇಂದ್ರ ಕೊಟ್ಟಿಗೆಹಾರ (ಗೌರವ ಸಲಹೆಗಾರರು) ಅವರನ್ನು ನೇಮಕ ಮಾಡಲಾಯಿತು.