ಅಳವಂಡಿ: ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದು ವೈದ್ಯಾಧಿಕಾರಿ ಡಾ ಸವಿತಾ ಹೇಳಿದರು.
ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಮುದಾಯ ಆಧಾರಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಒತ್ತಡದ ಜೀವನದಲ್ಲಿ ಸಮತೋಲನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಕಾರಣ ಪ್ರತಿಯೊಬ್ಬರೂ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಶಿಬಿರದಲ್ಲಿ ಜನರ ಬಿಪಿ, ಶುಗರ್, ದಂತ, ರಕ್ತ ಮುಂತಾದ ಆರೋಗ್ಯ ತಪಾಸಣೆ ನಡೆಸಲಾಯಿತು.
ಐಸಿಟಿಸಿ ಆಪ್ತ ಸಮಾಲೋಚಕಿ ಶೀಲಾ ಮಾತನಾಡಿ, ಎಚ್ಐವಿ ಸೋಂಕಿನ ಬಗ್ಗೆ ಆತಂಕ ಬೇಡ. ಇದರ ಬಗ್ಗೆ ಜನರಲ್ಲಿನ ತಪ್ಪು ಕಲ್ಪನೆ ಹಾಗೂ ಸೋಂಕು ಹರಡದಂತೆ ಜಾಗೃತಿ ವಹಿಸಬೇಕು. ಎಚ್ಐವಿಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ ಏಡ್ಸ್ ತಡೆಗಟ್ಟಲು ಜನಸಾಮಾನ್ಯರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಭಾರತಿ ಬೆಣಕಲ್, ಮಾಜಿ ಗ್ರಾಪಂ ಅಧ್ಯಕ್ಷೆ ಪಕೀರಮ್ಮ ಜಂತ್ಲಿ, ವೈದ್ಯಾಧಿಕಾರಿ ರಮೇಶ ಮೂಲಿಮನಿ, ಸಾವಿತ್ರಿ ಹಂಚಿನಾಳ, ಸೈಯದ್ ಅಬ್ಬಾಸ್, ನೀಲಗಂಗಾ, ನಾಗಪ್ಪ, ಶರಣಪ್ಪ ಗೌರಿಪುರ, ಲಕ್ಷ್ಮಣ, ಮಂಜುನಾಥ, ನೇತ್ರ ಸಹಾಯಕಿ ವಿನೋದಾ,ಆಪ್ತ ಸಮಾಲೋಚಕಿ ಕೆ.ಕಲ್ಪನಾ ಇತರರಿದ್ದರು.