ಸಾಗರ: ವಾಯುಮಾಲಿನ್ಯ ನಿಯಂತ್ರಣದಲ್ಲಿ ಎಲ್ಲರ ಪಾತ್ರವೂ ಪ್ರಮುಖ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಆರ್.ಶಶಿಕಲಾ ಹೇಳಿದರು.
ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಾಯುಮಾಲಿನ್ಯ ಜಾಗೃತಿ ದಿನಾಚರಣೆಯಲ್ಲಿ ಮಾತನಾಡಿ, ವಾಯುಮಾಲಿನ್ಯ ನಿಯಂತ್ರಣದಲ್ಲಿರಿಸಿಕೊಳ್ಳಲು ವಾಹನಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದರು.
ವಾಹನ ಮಾಲೀಕರು ಮತ್ತು ಚಾಲಕರು ಸೈಲೆನ್ಸರ್ಗಳನ್ನು ಟ್ಯಾಂಪರ್ ಮಾಡದೆ, ಕಲಬೆರಕೆ ಇಂಧನ ಬಳಸದೆ ಕಾಲಕಾಲಕ್ಕೆ ವಾಹನ ರಿಪೇರಿ ಮಾಡಿಸಬೇಕು. ಕಾಲಕಾಲಕ್ಕೆ ವಾಯುಮಾಲಿನ್ಯ ಪ್ರಮಾಣ ಪರೀಕ್ಷಿಸಿ ಸಂಬಂಧಿಸಿದ ಕೇಂದ್ರದಿಂದ ಪ್ರಮಾಣಪತ್ರ ಪಡೆಯಬೇಕು. ವಾಯುಮಾಲಿನ್ಯ ನಿಯಂತ್ರಿಸದಿದ್ದಲ್ಲಿ ವಿಷಾನಿಲದಿಂದ ವಾತಾವರಣ ಕಲುಷಿತಗೊಂಡು ಜೀವರಾಶಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸಿದರು.
ವಾಹನ ನಿರೀಕ್ಷಕ ಬಿ.ಎನ್.ವಾಸುದೇವ್ ಮಾತನಾಡಿ, ವಾಯುಮಾಲಿನ್ಯ ನಿಯಂತ್ರಿಸಲು ಇಲಾಖೆ ಜತೆ ಸಮಾಜ ಕೈಜೋಡಿಸಬೇಕು. ವಿದ್ಯಾರ್ಥಿಗಳು, ಸಾರ್ವಜನಿಕರು ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಶ್ರಮಿಸಬೇಕು ಎಂದರು.
ಮೋಟಾರು ವಾಹನ ನಿರೀಕ್ಷಕ ಜೆ.ಆರ್.ಹುಚ್ಚಪ್ಪ, ಗಿರೀಶ್, ವಿನಯಕುಮಾರ್ ಇದ್ದರು. ಪ್ರಭಾವತಿ ಪ್ರಾರ್ಥಿಸಿದರು. ಡಿ.ಜಿ. ಸದಾಶಿವ ಸ್ವಾಗತಿಸಿದರು. ಕೆ.ಬಿ.ಉಮೇಶ್ ವಂದಿಸಿದರು. ಕೆ.ಲಿಂಗಪ್ಪ ನಿರೂಪಿಸಿದರು.