ಬೈಂದೂರು: ದೇಶ ಲಾಕ್ಡೌನ್ ಆಗಿರುವ ಪರಿಣಾಮ ಕೃಷಿಕರ ಬದುಕು ಹೈರಾಣಾಗಿದೆ. ಬೈಂದೂರು ತಾಲೂಕಿನ ನಾಗೂರು, ನಾವುಂದ, ಉಪ್ಪುಂದ ಮುಂತಾದ ಕಡೆ ಕಲ್ಲಂಗಡಿ ಬೆಳೆಗಾರರು ಆತಂಕ ಪಡುವಂತಾಗಿದೆ.
ಈ ಪ್ರದೇಶದಲ್ಲಿ ಹತ್ತಾರು ಎಕರೆ ಕಲ್ಲಂಗಡಿ ಬೆಳೆದಿದ್ದು, ಮೂರು ವರ್ಷದ ಬಳಿಕ ಈ ಬಾರಿ ಉತ್ತಮ ಇಳುವರಿಯ ಜತೆಗೆ ಮಾರುಕಟ್ಟೆ ಧಾರಣೆ ಕೂಡ ಉತ್ತಮವಾಗಿತ್ತು. ಆದರೆ ಕರೊನಾ ವೈರಸ್ ಪರಿಣಾಮ ಲಾಕ್ಡೌನ್ನಿಂದ ಬೆಳೆ ಕಟಾವು ಮಾಡಲಾಗದೆ ಗದ್ದೆಯಲ್ಲೆ ಕೊಳೆತು ರೈತರು ನಷ್ಟ ಅನುಭವಿಸುವಂತಾಗಿದೆ.
ಆಹಾರ ಉತ್ಪನ್ನ, ತರಕಾರಿ, ಹಣ್ಣು ಮುಂತಾದವುಗಳಿಗೆ ತಡೆ ಇಲ್ಲದಿದ್ದರೂ ಖರೀದಿಸಲು ವ್ಯಾಪಾರಿಗಳು ಬಾರದೆ ಸಮಸ್ಯೆಯಾಗಿದೆ. ಈ ಭಾಗದಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಸ್ಥಳೀಯವಾಗಿ ಅಥವಾ ಹೊರಗಡೆ ಮಾರುಕಟ್ಟೆಗೆ ಕಳುಹಿಸಲು ಅನುವು ಮಾಡಿಕೊಡುವಂತೆ ಜಿಪಂ ಸದಸ್ಯೆ ಗೌರಿ ದೇವಾಡಿಗ ತಹಸೀಲ್ದಾರ್ ಬಸಪ್ಪ ಪಿ.ಪೂಜಾರ್ ಅವರಿಗೆ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕೃಷಿಕರಿಗೆ ಅನುಕೂಲವಾಗಲು ಅಥವಾ ನಿಯಮಗಳನ್ನು ಅಳವಡಿಸಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು ಎನ್ನುವುದು ಈ ಭಾಗದ ರೈತರ ಅಭಿಪ್ರಾಯವಾಗಿದೆ.