ಕೋಲಾರ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಾಶ ಮಾಡಿ ಆಹಾರ ಭದ್ರತೆಗೆ ಹೊರ ದೇಶಗಳ ಬಳಿ ಕೈಚಾಚಬೇಕಾದ ಪರಿಸ್ಥಿತಿ ನಿರ್ಮಿಸಲಿದೆ ಎಂದು ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಕಳವಳ ವ್ಯಕ್ತಪಡಿಸಿದರು.
ಹೊಸಮಟ್ನಹಳ್ಳಿ ರೈತನ ತೋಟದಲ್ಲಿ ನಮ್ಮ ಭೂಮಿ-ನಮ್ಮ ಹಕ್ಕು ಮಾರಾಟಕ್ಕಿಲ್ಲ. ಕಾರ್ಪೋರೇಟ್ ಕಂಪನಿಗಳಿಗೆ ಬಂಡವಾಳಶಾಹಿಗಳಿಗೆ, ಭೂ ದಲ್ಲಾಳಿಗಳಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂಬ ಘೋಷಣೆಯೊಂದಿಗೆ ರೈತ ಸಂಘ ಭಾನುವಾರ ಆಯೋಜಿಸಿದ್ದ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ದೇಶದಲ್ಲಿ ಸಾಮಾಜಿಕ ಅಸಮಾನತೆ ಹೆಚ್ಚಿ ಅತಿ ಸಣ್ಣ ರೈತರ ಬದುಕು ಬರ್ಬರವಾಗಲಿದೆ. ರೈತರನ್ನು ಕೃಷಿ ಭೂಮಿಯಿಂದ ವಕ್ಕಲೆಬ್ಬಿಸುವ ವ್ಯವಸ್ಥಿತ ಹುನ್ನಾರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಡುತ್ತಿವೆ. ಇದರ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದರು.
ರಾಜ್ಯ ಸಂಚಾಲಕ ಭಂಗವಾದಿ ನಾಗರಾಜ್ಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕರೊನಾ ಸಂದರ್ಭ ಬಳಸಿಕೊಂಡು ಅಪಾಯಕಾರಿ ಭೂ ಸುಧಾರಣೆ, ಎಪಿಎಂಸಿ, ವಿದ್ಯುತ್ ಮತ್ತಿತರ ರೈತ ವಿರೋಧಿ ಕಾರ್ಯಗಳನ್ನು ಜಾರಿಗೆ ತಂದಿದೆ. ಇದರಿಂದ ಗ್ರಾಮೀಣ ಪ್ರದೇಶದ ರೈತರನ್ನು ಸಂಪೂರ್ಣವಾಗಿ ನಾಶ ಮಾಡಿ ರಿಯಲ್ ಎಸ್ಟೇಟ್ ಉದ್ದಿಮೆಗಳಿಗೆ ಸಾವಿರಾರು ಎಕರೆ ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಡುತ್ತಿದೆ ಎಂದು ಆಪಾದಿಸಿದರು.
ಕಾರ್ಪೋರೇಟ್ ಕಂಪನಿಗಳಿಗೆ ಮತ್ತು ಬಂಡವಾಳಶಾಹಿಗಳಿಗೆ ಗ್ರಾಮಗಳಿಗೆ ಪ್ರವೇಶವಿಲ್ಲವೆಂದು ಪ್ರತಿ ಗ್ರಾಮದಲ್ಲೂ ನಾಮಫಲಕ ಅಳವಡಿಸುವ ಮೂಲಕ ಭೂ ಸುಧಾರಣೆ ಕಾಯ್ದೆ ವಿರುದ್ಧ ಜನ ಜಾಗೃತಿ ಮೂಡಿಸಿ ಈ ಕಾಯ್ದೆಗಳನ್ನು ವಾಪಸು ತೆಗೆಯುವಂತೆ ಹೋರಾಟ ಮಾಡಬೇಕು ಎಂದು ತಿಳಿಸಿದರು. ರೈತರಾದ ಆಂಜಿನಪ್ಪ. ಹುಲ್ಲೇಗೌಡ, ನಾಗರಾಜ್, ಉಮ, ಜಯಮ್ಮ, ಬಿಂದು. ಪಾಪಮ್ಮ. ಮಂಜುಳ. ಮೀನಾ ಸರಸ್ವತಿ. ನವೀನ್. ನೀತಿನ್. ಶಕುಂತಲಾ, ಕರ್ಣ ವಸಂತ್ಕುಮಾರ್ ಇದ್ದರು.