ನವದೆಹಲಿ: ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪಾವತಿಸುವಂತೆ ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದ ಬೆನ್ನಲ್ಲೇ ಇಂದು ರಾತ್ರಿ 11:59ರೊಳಗೆ ಎಲ್ಲ ಹಣವನ್ನು ಸಂದಾಯ ಮಾಡುವಂತೆ ದೂರ ಸಂಪರ್ಕ ಇಲಾಖೆ ಭಾರ್ತಿ ಏರಟೆಲ್ ಮತ್ತು ವೋಡಾಫೋನ್ ಐಡಿಯಾ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿದ್ದು, ನೋಟಿಸ್ ಹೊರಡಿಸಿದೆ.
ಭಾರ್ತಿ ಏರ್ಟೆಲ್ ಮತ್ತು ವೋಡಾಫೋನ್ ಐಡಿಯಾ ಕಂಪನಿಗಳು ಬಾಕಿ ಉಳಿದಿರುವ ಒಟ್ಟು 92 ಸಾವಿರ ಕೋಟಿ ರೂ. ಮೌಲ್ಯದ ಸರಿಹೊಂದಿಸಲ್ಪಟ್ಟ ಒಟ್ಟು ಆದಾಯ(ಎಜಿಆರ್) ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಾಗಿದೆ.
ಇದಕ್ಕೂ ಮುನ್ನ ಇಂದು ಬೆಳಗ್ಗೆಯಷ್ಟೇ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಬಾಕಿ ಉಳಿಸಿಕೊಂಡಿರುವ 1.47 ಲಕ್ಷ ಕೋಟಿ ರೂ. ಎಜಿಆರ್ ಶುಲ್ಕವನ್ನು ಮರು ಪಾವತಿಸುವಂತೆ ಖಡಕ್ ಸೂಚನೆ ನೀಡಿದೆ. ಅಲ್ಲದೆ, ಈ ಹಿಂದಿನ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಹಣವನ್ನು ಪಾವತಿಸದ ಟೆಲಿಕಾಂ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿವರಣೆ ಕೋರಿ ಸಮನ್ಸ್ ನೀಡಿದೆ.
ಭಾರ್ತಿ ಏರ್ಟೆಲ್, ವೋಡಾಫೋನ್, ಎಂಟಿಎನ್ಎಲ್, ಬಿಎಸ್ಎನ್ಎಲ್, ರಿಲಯನ್ಸ್ ಕಮ್ಯೂನಿಕೇಷನ್, ಟಾಟಾ ಟೆಲಿಕಮ್ಯೂನಿಕೇಷನ್ ಮತ್ತು ಇತರೆ ಟೆಲಿಕಾಂ ಕಂಪನಿಗಳ ಅಧಿಕಾರಿಗಳು ಮಾರ್ಚ್ 17ರೊಳಗೆ ನ್ಯಾಯಾಲಯಕ್ಕೆ ವಿವರಣೆ ನೀಡಬೇಕಿದೆ.
ಕೋರ್ಟ್ ನೀಡಿದ ಎಜಿಆರ್ ಹಿಂಪಡೆತ ಆದೇಶವು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿ, ಹಣ ಪಾವತಿಸದ ಕಂಪನಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗದು ಎಂದು ಹೇಳಿದ್ದ ದೂರ ಸಂಪರ್ಕ ಇಲಾಖೆಯನ್ನು ಕೋರ್ಟ್ ಇದೇ ವೇಳೆ ತರಾಟೆಗೆ ತೆಗೆದುಕೊಂಡಿತು. ಇದಾದ ಬೆನ್ನಲ್ಲೇ ದೂರ ಸಂಪರ್ಕ ಇಲಾಖೆಯು ತನ್ನ ಆದೇಶವನ್ನು ಹಿಂಪಡೆದುಕೊಂಡಿದೆ.
ಎಜಿಆರ್ ಶುಲ್ಕ ಪಾವತಿಸಲು ಇನ್ನು ಹೆಚ್ಚಿನ ಸಮಯಾವಕಾಶ ಕೋರಿ ಟೆಲಿಕಾಂ ಕಂಪನಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್. ಅಬ್ದುಲ್ ನಾಜಿರ್ ಮತ್ತು ಎಂ. ಆರ್. ಷಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇಂದು ಮಹತ್ವದ ಆದೇಶ ಹೊರಡಿಸಿತು. (ಏಜೆನ್ಸೀಸ್)