ಶ್ರೀರಂಗಪಟ್ಟಣ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಕೀಲರ ಹಿತಾಶಕ್ತಿ ಕಾಯಲು ರಾಜ್ಯ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ವಕೀಲರು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತೇವೆ ಎಂದು ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ ಹೇಳಿದರು.
ಪಟ್ಟಣದ ನ್ಯಾಯಾಲಯದ ಮುಂಭಾಗದಲ್ಲಿ ಗುರುವಾರ ವಕೀಲರು ಕಲಾಪ ಬಹಿಷ್ಕರಿಸಿ ಧರಣಿ ನಡೆಸಿದರು. ಸತ್ಯನಾರಾಯಣ ಮಾತನಾಡಿ, ಇತ್ತೀಚೆಗೆ ನಿರ್ಭೀತಿಯಿಂದ ವಕೀಲ ವೃತ್ತಿ ನಿರ್ವಹಿಸುವುದು ಕಷ್ಟಸಾಧ್ಯವಾಗುತ್ತಿದೆ. ವಕೀಲರ ಮೇಲಿನ ದೌರ್ಜನ್ಯ, ಹತ್ಯೆಗಳಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ವಕೀಲರ ಸಂರಕ್ಷಣಾ ಕಾಯ್ದೆ ಅವಶ್ಯ. ಇಂತಹ ಗಂಭೀರ ವಿಚಾರವನ್ನು ಸರ್ಕಾರ ನಿರ್ಲಕ್ಷಿಸಬಾರದು. ಕಳೆದ 2 ವರ್ಷಗಳಿಂದ ನಿರಂತರವಾಗಿ ವಕೀಲರು ಈ ಮಸೂದೆ ಜಾರಿಗಾಗಿ ಒತ್ತಾಯಿಸುತ್ತಿರುವುದನ್ನು ಸರ್ಕಾರ ಮನಗಾಣಬೇಕು ಎಂದರು.
ಸಂಘದ ಕಾರ್ಯದರ್ಶಿ ಪವನ್ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ವಕೀಲರ ಸುರಕ್ಷತೆಗೆ ಸೂಕ್ತ ನಿರ್ಧಾರ ಕೈಗೊಂಡು ಜಾರಿಗೊಳಿಸುವ ಭರವಸೆ ಇದೆ. ಆದರೆ ಸದನದಲ್ಲಿ ಈ ವಿಚಾರ ಪ್ರಸ್ತಾಪವೇ ಆಗದಿರುವುದು ಬೇಸರ ತರಿಸಿದೆ. ನಮ್ಮ ಬೇಡಿಕೆ ಈಡೇರುವವರೆಗೆ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಹೋರಾಟ ಕೈಗೊಳ್ಳಲಾಗುವುದು ಎಂದರು.
ಸಂಘದ ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಕೆ.ಆರ್.ಸಾಗರ ವಿನಯ್, ಹಿರಿಯ ವಕೀಲ ನಿಂಗೇಗೌಡ, ಕೆ.ಕುಮಾರ್, ಗಂಗರಾಜು, ಶಿವರಾಂ, ಸುಬ್ರಹ್ಮಣ್ಯ, ಜಯರಾಮೇಗೌಡ, ರವೀಶ್, ಸುನೀಲ್, ಪುಲಿಕೇಶಿ, ಪುಷ್ಪಲತಾ, ಚಂದ್ರಕಲಾ, ಜಯಂತಿ ಸೇರಿದಂತೆ ಇತರರು ದ್ದರು.