ನವದೆಹಲಿ: ದೇಶಾದ್ಯಂತ ಕೋವಿಡ್-19 ಲಾಕ್ಡೌನ್ ಜಾರಿಯಲ್ಲಿ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ ಎಟಿಎಂ ಟ್ರ್ಯಾನ್ಸಾಕ್ಷನ್ಗೆ ಹಾಗೂ ಉಳಿತಾಯ ಖಾತೆಯಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿರುವುದಕ್ಕೆ ಬ್ಯಾಂಕ್ಗಳು ವಿಧಿಸುತ್ತಿದ್ದ ದಂಡದಿಂದ ವಿನಾಯಿತಿ ನೀಡಿತ್ತು. ಈ ವಿನಾಯಿತಿಗಳು ಜೂನ್ 30ರವರೆಗೆ ಮಾತ್ರ ಅನ್ವಯಿಸುತ್ತವೆ.
ಆದರೆ, ಕೇಂದ್ರ ಸರ್ಕಾರ ಈ ಸೌಲಭ್ಯವನ್ನು ವಿಸ್ತರಿಸಿರುವ ಬಗ್ಗೆಯಾಗಲಿ ಅಥವಾ ವಿಸ್ತರಿಸುವ ಸಾಧ್ಯತೆ ಬಗ್ಗೆಯಾಗಲಿ ಏನೊಂದು ಮಾತು ಹೇಳಿಲ್ಲ. ಹಾಗಾಗಿ, ಜುಲೈ 1ರಿಂದ ಎಟಿಎಂನಲ್ಲಿ ಹೆಚ್ಚುವರಿ ಟ್ರ್ಯಾನ್ಸಾಕ್ಷನ್ ಮಾಡುವ ಮುನ್ನ ಹಾಗೂ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದವರು ಎಚ್ಚರವಹಿಸುವುದು ಒಳಿತು. ಇಲ್ಲವಾದರೆ, ವಿನಾಕಾರಣ ಬ್ಯಾಂಕ್ಗಳಿಗೆ ಭಾರಿ ಮೊತ್ತದ ದಂಡ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: ಸುಶಾಂತ್ ಟ್ವಿಟರ್ನ ಕಮೆಂಟ್ಗಳನ್ನು ಅಳಿಸಲಾಗುತ್ತಿದೆಯೆ? ಪೊಲೀಸರಿಂದ ತನಿಖೆ
ಕೋವಿಡ್-19 ಹಿನ್ನೆಲೆಯಲ್ಲಿ ಮಾರ್ಚ್ 24ರ ಮಧ್ಯರಾತ್ರಿಯಿಂದ ಜಾರಿಗೆ ಬಂದ ಲಾಕ್ಡೌನ್ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಉಳಿತಾಯ ಖಾತೆ ಹೊಂದಿರುವವರು ತಮ್ಮ ಖಾತೆಯಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದೇ ಇದ್ದರೆ ಹಾಗೂ ಯಾವುದೇ ಬ್ಯಾಂಕ್ನ ಎಟಿಎಂನಿಂದ ಹೆಚ್ಚುವರಿ ಟ್ರ್ಯಾನ್ಸಾಕ್ಷನ್ ಮಾಡಿದರೆ ಜೂನ್ 30ರವರೆಗೆ ದಂಡ ವಿಧಿಸದಂತೆ ಬ್ಯಾಂಕ್ಗಳಿಗೆ ಸೂಚಿಸಿದ್ದರು. ಇದರಿಂದ ಕೋಟ್ಯಂತರ ಗ್ರಾಹಕರಿಗೆ ಅನುಕೂಲವಾಗಿತ್ತು.
ಆಗಸ್ಟ್ 31ರವರೆಗೆ ಇಎಂಐ ಪಾವತಿ ಮೇಲೆ ವಿನಾಯಿತಿಗಳನ್ನು ನೀಡಲಾಗಿದೆ. ಆದರೆ. ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದ ಗ್ರಾಹಕರಿಗೆ ದಂಡ ವಿಧಿಸುವುದು, ಎಟಿಎಂನಿಂದ ಹೆಚ್ಚುವರಿ ಟ್ರಾನ್ಸಾಕ್ಷನ್ಗೆ ದಂಡ ವಿಧಿಸುವುದರಿಂದ ವಿನಾಯಿತಿ ನೀಡುವ ಬಗ್ಗೆ ಅವರು ಏನೊಂದು ಹೇಳಿಕೆ ನೀಡಿಲ್ಲ.