ಬೆಂಗಳೂರು: ಕಿರುತೆರೆ ಮೂಲಕ ಸಿನಿಮಾ ಪಯಣ ಆರಂಭಿಸಿದ್ದ ನಟಿ ಸಂಗೀತಾ ಶೃಂಗೇರಿ ಸದ್ಯ ಫುಲ್ಟೈಮ್ ಸಿನಿಮಾಗಳಲ್ಲಿಯೇ ಬಿಜಿಯಾಗಿದ್ದಾರೆ. ಒಂದಾದ ಬಳಿಕ ಒಂದರಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಹಿರಿತೆರೆಯಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಸೂಚನೆ ನೀಡಿದ್ದಾರೆ. ಏಕೆಂದರೆ, ಅವರ ಸಿನಿಮಾ ಪಟ್ಟಿಗೆ ಇನ್ನೊಂದು ಚಿತ್ರ ಸೇರ್ಪಡೆಗೊಂಡಿದ್ದು, ಇನ್ನೇನು ಅದರ ಚಿತ್ರೀಕರಣವೂ ಮುಕ್ತಾಯಗೊಂಡಿದೆ.
‘ಪಂಪ’ ಶೀರ್ಷಿಕೆಯ ಸಿನಿಮಾದಲ್ಲಿ ಸಂಗೀತಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಹಿರಿಯ ನಿರ್ದೇಶಕ ಎಸ್ ಮಹೇಂದರ್. ಸದ್ದಿಲ್ಲದೆ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಮಹೇಂದರ್, ಮಾರ್ಚ್ ವೇಳೆಗೆ ಸಿನಿಮಾ ಬಗ್ಗೆ ಬಹಿರಂಗ ಮಾಡಬೇಕೆನ್ನುವಷ್ಟರಲ್ಲಿ ಲಾಕ್ಡೌನ್ನಿಂದಾಗಿ ಮುಂದೂಡಬೇಕಾಯಿತು. ಇದೀಗ ಇದೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸಂಗೀತಾ, ಚಿತ್ರದ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡಿದ್ದಾರೆ. ‘ಪಂಪ’ ಇದೊಂದು ಕನ್ನಡ ಮೇಷ್ಟ್ರ ಕಥೆ. ನಾನು ಎನ್ಆರ್ಐ ಆಗಿರುತ್ತೇನೆ. ಕನ್ನಡ ಕಲಿಯಬೇಕು, ಅದರ ಬಗ್ಗೆ ಅಧ್ಯಯನ ಮಾಡಬೇಕೆಂದು ಬೆಂಗಳೂರಿಗೆ ಬಂದಿರುತ್ತೇನೆ. ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಸಿನಿಮಾದಲ್ಲಿ ಕನ್ನಡ ನಾಡು-ನುಡಿ ಬಗ್ಗೆಯೂ ಒಂದಷ್ಟು ಅಂಶಗಳಿವೆ. ಇಲ್ಲಿಯವರೆಗೂ ಫ್ಯಾಮಿಲಿ ಕಥೆಗಳ ಮೂಲಕ ಮನೆಮಾತಾಗಿದ್ದ ನಿರ್ದೇಶಕರು ಈ ಸಿನಿಮಾದಲ್ಲಿ ಅದರಿಂದ ಆಚೆ ಬಂದಿದ್ದಾರೆ.
ಥ್ರಿಲ್ಲರ್ ಶೈಲಿಗೆ ಕೈ ಹಾಕಿದ್ದಾರೆ’ ಎನ್ನುವ ಸಂಗೀತಾ, ಹಿರಿಯ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಖುಷಿಯನ್ನೂ ಹಂಚಿಕೊಳ್ಳುತ್ತಾರೆ. ‘ಕನ್ನಡದ ಖ್ಯಾತ ನಿರ್ದೇಶಕರಲ್ಲಿ ಮಹೇಂದರ್ ಸಹ ಒಬ್ಬರು. ಬಹುದಿನಗಳ ಬಳಿಕ ಅವರ ಆಗಮನವಾಗುತ್ತಿದೆ. ಅವರ ಚಿತ್ರದಲ್ಲಿ ನಟಿಸಿದ್ದೇ ಖುಷಿ’ ಎನ್ನುತ್ತಾರೆ. ಚಿತ್ರದಲ್ಲಿ ರಾಘವ್ ನಾಯಕ್ ಸಂಗೀತಾಗೆ ಜೋಡಿಯಾಗಿದ್ದು, ಇದು ಅವರ ಮೊದಲ ಸಿನಿಮಾ. ಇನ್ನುಳಿದಂತೆ ಮಹೇಂದರ್ ಅವರ ಹಲವು ಸಿನಿಮಾಗಳಿಗೆ ಹಂಸಲೇಖ ಸಂಗೀತ ಮತ್ತು ಸಾಹಿತ್ಯ ಒದಗಿಸಿದ್ದರು. ‘ಪಂಪ’ ಚಿತ್ರದಲ್ಲಿಯೂ ಅದು ಮುಂದುವರಿಯುತ್ತಿದೆ. 40 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ಮಾಡಿದ್ದಾರೆ. ಲಕ್ಷ್ಮೀಕಾಂತ್ ವಿ. ಎನ್ನುವವರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ರಮೇಶ್ ಬಾಬು ಛಾಯಾಗ್ರಹಣ, ಮೋಹನ್ ಕಾಮಾಕ್ಷಿ ಸಂಕಲನ, ಮಹೇಶ್ ದೇವ್ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.