ಬೆಂಗಳೂರು: ಡಿ. 17ರಂದು ನಟ ಶ್ರೀಮುರಳಿ ಅವರ ಜನ್ಮದಿನ. ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳ ಮುಂದೆ ಬರಲು ನಿರ್ಧರಿಸಿದ್ದಾರೆ. ಈ ಕುರಿತಾಗಿ ಒಂದು ವಿಡಿಯೋ ಮಾಡಿ ಶೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ‘ಎಲ್ಲರಿಗೂ ನಮಸ್ಕಾರ. ಇಷ್ಟು ವರ್ಷದ ಹುಟ್ಟುಹಬ್ಬಕ್ಕೆ ಸೇರಲು ಆಗಿರಲಿಲ್ಲ. ಯಾಕೆ ಎಂಬುದು ನಿಮಗೂ ಗೊತ್ತು. ಈ ಬಾರಿಯೂ ಸೇರುವ ಪರಿಸ್ಥಿತಿ ಇರಲಿಲ್ಲ. ನಿಮ್ಮ ಪ್ರೀತಿಗೆ ಏನ್ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ನಿಮ್ಮ ಆಜ್ಞೆಯಂತೆಯೇ ನಡೀಬೇಕು. ಹಾಗಾಗಿ ಈ ವರ್ಷ ನಿಮ್ಮನ್ನೆಲ್ಲ ಭೇಟಿ ಮಾಡೋಕೆ ನನಗೊಂದು ಅವಕಾಶ ಸಿಕ್ಕಿದೆ. ಇದೇ ಡಿಸೆಂಬರ್ 17ನೇ ತಾರೀಖು, ವಸಂತ ನಗರದ ದೇವರಾಜ್ ಅರಸ್ ಭವನ್, ಮಿಲರ್ಸ್ ರೋಡ್, ಅಂಬೇಡ್ಕರ್ ಭವನ್ ಹಿಂದಿರುವ ಜಾಗದಲ್ಲಿ ಬೆಳಗ್ಗೆ 10:30 ನಂತರ ನಾನು ನಿಮಗೆ ಸಿಗ್ತಿನಿ’. ಯಾರ್ಯಾರು ನೋಡಬೇಕು, ಮೀಟ್ ಮಾಡಬೇಕೋ, ಜತೆಗೆ ಸೇರೋಣ ಎಂದಿದ್ದಾರೆ.
View this post on Instagram
ಯಾರೂ ಹಾರ ತುರಾಯಿ, ಗಿಫ್ಟ್ ತರಬೇಡಿ. ಹಣ ಖರ್ಚು ಮಾಡಬೇಡಿ. ಅದು ನಿಮ್ಮ ದುಡಿಮೆ. ಇದಕ್ಕೆಲ್ಲ ಖರ್ಚು ಮಾಡಬೇಡಿ. ಮನಸ್ಸಿದ್ದರೆ, ಅನಾಥಾಶ್ರಮಕ್ಕೆ ನೀಡಿ, ದಾನ ಧರ್ಮ ಮಾಡಿ. ಖಾಲಿ ಕೈಯಲ್ಲಿ ಬನ್ನಿ. ಮನಸ್ಸು ಬಿಚ್ಚಿ ಮಾತನಾಡೋಣ. ನಿಮಗಾಗಿ, ನಿಮ್ಮನ್ನು ಭೇಟಿ ಮಾಡುವ ಉದ್ದೇಶಕ್ಕೆ ಮಾತ್ರ ಈ ಭೇಟಿ. ಬನ್ನಿ ಸಿಗೋಣ, ಜೈ ಹಿಂದ್’ ಎಂದು ಶ್ರೀಮುರಳಿ ಹೇಳಿದ್ದಾರೆ.
ಬಘೀರ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಒದಗಿಸಿದ್ದಾರೆ.