ಶಿವಮೊಗ್ಗ: ವಿಧಾನಸಭೆ ಚುನಾವಣಾ ಪ್ರಚಾರ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಪ್ರಮುಖ ಪಕ್ಷಗಳ ರಾಜಕೀಯ ನಾಯಕರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಿವಿಧೆಡೆ ಸಮಾವೇಶದಲ್ಲಿ ಪಾಲ್ಗೊಂಡು, ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಕಾಂಗ್ರೆಸ್ ಪರ ಹ್ಯಾಟ್ರಿಕ್ ಹೀರೋ ಬ್ಯಾಟಿಂಗ್
ಈಗಾಗಲೇ ಕೆಲ ಅಭ್ಯರ್ಥಿಗಳ ಪರ ಸ್ಯಾಂಡಲ್ವುಡ್ ನಟ-ನಟಿಯರು ಪ್ರಚಾರ ನಡೆಸಿದ್ದಾರೆ. ಇದೀಗ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತೀರ್ಥಹಳ್ಳಿಯಲ್ಲಿ ರಾಹುಲ್ ಗಾಂಧಿ ಜತೆಗೆ ಕಾಂಗ್ರೆಸ್ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಬಾದಾಮಿ ಜನರಿಗೆ ದ್ರೋಹ ಮಾಡಿದ ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸಲು ಕಾಂಗ್ರೆಸ್ನ್ನು ಸೋಲಿಸಿ: ಬಿಎಸ್ವೈ
ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ಗೆ ಈಗಾಗಲೇ ಸೇರ್ಪಡೆಯಾಗಿದ್ದು, ಸಹೋದರ ಮಧು ಬಂಗಾರಪ್ಪ ಪರ ಪ್ರಚಾರ ಕೂಡಾ ನಡೆಸಿದ್ದಾರೆ. ಗೀತಾ ಶಿವರಾಜ್ ಕುಮಾರ್ ನಡೆಯನ್ನು ಬೆಂಬಲಿಸಿ ಹ್ಯಾಟ್ರಿಕ್ ಹೀರೋ ಮಧು ಬಂಗಾರಪ್ಪ ಅವರಿಗೆ ಸಾಥ್ ನೀಡಿದ್ದರು.
ತೀರ್ಥಹಳ್ಳಿಯಲ್ಲಿ ಪ್ರಚಾರ
ಇದೀಗ ರಾಹುಲ್ ಗಾಂಧಿಯೊಂದಿಗೆ ತೀರ್ಥಹಳ್ಳಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳುವುದಕ್ಕೆ ನಟ ಶಿವರಾಜ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಬರಲು ಶಿವರಾಜ್ ಕುಮಾರ್ ಅವರನ್ನು ಮಲ್ಲಿಕಾರ್ಜುನ ಖರ್ಗೆ ಅವರ ಮನವಿ ಮೇರೆಗೆ ಮಧು ಬಂಗಾರಪ್ಪ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರವನ್ನು ಬೆಂಬಲಿಸುವುದರಿಂದ ಅಭಿವೃದ್ಧಿ ಕಾರ್ಯ ಡಬಲ್ ಆಗಲಿದೆ: ಯೋಗಿ ಆದಿತ್ಯನಾಥ್
ಕಿಮ್ಮನೆ ರತ್ನಾಕರ್ ಪರ ಮತ ಯಾಚನೆ
ಮೇ 2ರಂದು ತೀರ್ಥಹಳ್ಳಿಯಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪರ ಮತಯಾಚನೆ ನಡೆಸಲಿದ್ದಾರೆ.