ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ರಾಜಕೀಯರಂಗಕ್ಕೆ ಎಂಟ್ರಿ ಕೊಡುತ್ತಾರೆ ಅನ್ನೋ ಸುದ್ದಿ ಮೊದಲಿಂದಲೂ ಕೇಳಿ ಬರ್ತಿದೆ. ದೊಡ್ಮನೆ ಕುಟುಂಬದವರನ್ನು ರಾಜಕೀಯಕ್ಕೆ ಕರೆತರಬೇಕೆಂಬ ಪ್ರಯತ್ನಗಳು ಹಿಂದೆ ಸಹ ನಡೆದಿತ್ತು. ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಬಹಿರಂಗವಾಗಿಯೇ ಶಿವಣ್ಣನಿಗೆ ಆಹ್ವಾನ ನೀಡಿದ್ದರು.
ಎಷ್ಟೇ ಆಫರ್ಗಳು ಬಂದರು ಶಿವಣ್ಣ ಮಾತ್ರ ನೋ ಪಾಲಿಟಿಕ್ಸ್ ಓನ್ಲಿ ಸಿನಿಮಾ ಎನ್ನುತ್ತಾ ಬಂದಿದ್ದಾರೆ. ಆದರೆ ಸಮಾಜಕ್ಕೆ ಏನಾದರೂ ವಾಪಸ್ ನೀಡಬೇಕು ಎನ್ನುವ ತುಡಿತ ಮಾತ್ರ ಇದೆ ಎನ್ನುತ್ತಾರೆ ಶಿವಣ್ಣ.
“ಜನರನ್ನು ಆಳುವವರಿಗೆ ಪೊಲಿಟಿಕಲ್ ಪವರ್ ಬೇಕು, ನಾವು ಜನರನ್ನು ಪ್ರೀತಿಸುವವರು” ಎನ್ನುವ ‘ರಾಜಕುಮಾರ’ ಚಿತ್ರದ ಡೈಲಾಗ್ ರೀತಿ ರಾಜಕೀಯದಿಂದ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ.
ಶಿವಣ್ಣನ ಪತ್ನಿ ಗೀತಾ ಶಿವರಾಜ್ ಚುಣಾವಣೆಗಳಲ್ಲಿ ಸ್ಪರ್ಧಿಸಿದಾಗ ಶಿವಣ್ಣ ಪ್ರಚಾರ ನಡೆಸಿದ್ದು ಇದೆ. ಇತ್ತೀಚೆಗೆ ತಮಿಳು ಸಂದರ್ಶನವೊಂದರಲ್ಲಿ ಮತ್ತೊಮ್ಮೆ ಶಿವಣ್ಣ ಪೊಲಿಟಿಕಲ್ ಎಂಟ್ರಿ ವಿಚಾರದ ಬಗ್ಗೆ ಮಾತನಾಡಿದ್ದಾರೆ.”ಚಿತ್ರರಂಗದಲ್ಲಿ ಇರಲು ರಾಜಕೀಯದಿಂದ ದೂರ ಇರುವುದೇ ಉತ್ತಮ” ಅಂತ ಸೆಂಚುರಿ ಸ್ಟಾರ್ ಹೇಳಿದ್ದಾರೆ. ರಾಜಕೀಯ ಹಿನ್ನೆಲೆ ಕುಟುಂಬದಿಂದಲೇ ಹುಡುಗಿಯನ್ನು ತಂದಿದ್ದೇವೆ ಹಾಗಾಗಿ ನಾನು ರಾಜಕೀಯಕ್ಕೆ ಹೋಗಿದ್ರೆ, ಅಪ್ಪಾಜಿ ಕೂಡ ಬೇಡ ಎನ್ನುತ್ತಿರಲಿಲ್ಲ” ಎಂದಿದ್ದಾರೆ.
ನಾನೇನಾದರೂ ರಾಜಕೀಯ ಎಂಟ್ರಿ ಕೊಟ್ಟ ಉನ್ನತ ಸ್ಥಾನಕ್ಕೆ ಹೋದರೆ, ಮೊದಲು ನಾನು ಮಾಡೋದು ಎಲ್ಲ ಅಧಿಕಾರಿಗಳನ್ನು ಕರೆಸುತ್ತೇನೆ. ಒಳ್ಳೆ ಮನಸ್ಸಿನಿಂದ ಕೆಲಸ ಮಾಡಬೇಕು, ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು ಎನ್ನುತ್ತೇನೆ ಎಂದಿದ್ದಾರೆ. ಇಡೀ ವ್ಯವಸ್ಥೆಯನ್ನು ಮೊದಲು ಬದಲಿಸುತ್ತೇನೆ. ಮೊದಲು ಪೊಲೀಸ್ ಇಲಾಖೆ ಸಮಾಜಕ್ಕೆ ರಕ್ಷಣಾ ಕವಚ. ಅದು ಸರಿಯಾದರೆ ಎಲ್ಲವೂ ಸರಿಯಾಗುತ್ತೆ. ಅದೇ ಕೀಲಿಕೈ. ಪೊಲೀಸ್ ಇಲಾಖೆ ಕೊಂಚ ಸ್ಟ್ರಿಕ್ಟ್ ಆದ್ರೆ ಉಳಿದದ್ದೆಲ್ಲಾ ತಾನಾಗಿಯೇ ಬದಲಾಗುತ್ತದೆ ಎಂದರು.
ಮಂತ್ರಿ, ಸಿಎಂ ಯಾರೇ ಆಗಿದ್ದರೂ ತಾರತಮ್ಯ ಮಾಡಬಾರದು. ತಪ್ಪು ಅಂದ್ರೆ ತಪ್ಪು ಎನ್ನಬೇಕು ಅಷ್ಟೆ ಎಂದು ಶಿವಣ್ಣ ಹೇಳಿದರು.
ಸೀಮೆಎಣ್ಣೆ ಸುರಿದುಕೊಂಡು ವಿಧಾನಸೌಧ ಮುಂಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ