ಬೆಂಗಳೂರು: ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಹ್ಯಾಂಗ್ಮನ್ ಪವನ್ ಜಲ್ಲಾದ್ಗೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ನಟ ಜಗ್ಗೇಶ್ ಘೋಷಿಸಿದ್ದಾರೆ. ಟ್ವೀಟ್ ಮೂಲಕ ಈ ವಿಷಯ ತಿಳಿಸಿದ್ದಾರೆ.
ನಿರ್ಭಯಾ ಅತ್ಯಾಚಾರ, ಹತ್ಯೆ ಅಪರಾಧಿಗಳನ್ನು ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸಲು ದೆಹಲಿ ಪಟಿಯಾಲಾ ನ್ಯಾಯಾಲಯ ಆದೇಶ ನೀಡಿದೆ. ಈ ಕೆಲಸವನ್ನು ಉತ್ತರ ಪ್ರದೇಶದ ಪೊಲೀಸರು ಪವನ್ ಜಲ್ಲಾದ್ (57)ಗೆ ಒಪ್ಪಿಸಿದ್ದಾರೆ.
ಪವನ್ ಜಲ್ಲಾದ್ ಕುಟುಂಬದವರು ಹಿಂದಿನಿಂದಲೂ ಹ್ಯಾಂಗ್ಮನ್ ಕೆಲಸವನ್ನೇ ಮಾಡುತ್ತ ಬಂದಿದ್ದಾರೆ. ಈಗ ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೆ ಹಾಕಲಿರುವ ಪವನ್ ಜಲ್ಲಾದ್, ನಾನು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧವಾಗಿದ್ದೇನೆ. ಇದು ನನ್ನ ಮಗಳ ಮದುವೆಗೆ ಹಣ ಹೊಂದಿಸುವುದಕ್ಕಾಗಿ ದೇವರೇ ಕೊಟ್ಟ ಅವಕಾಶ ಎಂದು ಭಾವುಕರಾಗಿ ದೇವರಿಗೆ ನಮಿಸಿದ್ದರು.
ಈ ಬಗ್ಗೆ ನಿನ್ನೆ ವಿಜಯವಾಣಿ ವೆಬ್ಸೈಟ್ (Vijayavani.net) ಸುದ್ದಿ ಮಾಡಿತ್ತು. ಸುದ್ದಿಯ ಲಿಂಕ್ನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿರುವ ನಟ ಜಗ್ಗೇಶ್ ಅವರು, ಮಾನ್ಯರೇ ರಾಕ್ಷಸ ಸಂಹಾರವೆಂಬುದು ದೇವರ ನಿಯಮ. ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದು ನೀವು ಹೇಳಿದ್ದು ಕೇಳಿ ಭಾವುಕನಾದೆ. ನೀವೇ ಆ ಪಾಪಿಗಳನ್ನು ನೇಣಿಗೇರಿಸಿದರೆ ನಾನು ನನ್ನ ಕಲೆಯಿಂದ ದುಡಿದ 1 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ. ಆ ಹಣವನ್ನು ನಿಮಗಾಗಿ ಇಂದೇ ಮೀಸಲಿಟ್ಟಿದ್ದೇನೆ. ದುರುಳ ನಿಗ್ರಹವೂ ದೇವರ ಸೇವೆ…ಹರಿ ಓಂ ಎಂದು ಟ್ವೀಟ್ ಮಾಡಿದ್ದಾರೆ.