ಬೆಂಗಳೂರು: ಓವರ್ ದಿ ಟಾಪ್ (ಓಟಿಟಿ) ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ನಟ ದರ್ಶನ್, ಚಿತ್ರಮಂದಿರಗಳನ್ನು ತೆರೆಯದಿದ್ದಕ್ಕೆ ಅಸಮಾಧಾನ ಹೊರಹಾಕಿ ಓಟಿಟಿ ಒಂದು ಸ್ಕ್ಯಾಮ್ ಎಂದು ಟೀಕಿಸಿದರು.
ಲೈವ್ ಆರಂಭಿಸಿದ ದರ್ಶನ್, ಮೊದಲನೇಯದಾಗಿ ಕರೊನಾ ಹಿನ್ನೆಲೆ ಬರ್ತಡೇಗೆ ಬ್ರೇಕ್ ಹಾಕಿದರು. ಬಳಿಕ ಅಭಿಮಾನಿಯೊಬ್ಬ ಓಟಿಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದರ್ಶನ್, ನಿರ್ಮಾಪಕರು ಎಲ್ಲಿಂದನೋ ದುಡ್ಡು ತರುತ್ತಾರೆ. ಜನರಿಗೆ ಮನರಂಜನೆ ಮಾಡುವ ಉದ್ದೇಶದಿಂದ ನಾವೆಲ್ಲ ಜೀವನವನ್ನು ಪಣಕ್ಕಿಟ್ಟು ಸಿನಿಮಾ ಮಾಡುತ್ತೇವೆ. ಹೀಗಾಗಿ ಸಿನಿಮಾವನ್ನು ಮೊಬೈಲ್ನಲ್ಲೋ ಅಥವಾ ಟಿವಿಯಲ್ಲೋ ನೋಡಿದರೆ ಮಜಾ ಇರಲ್ಲ ಎಂದರು.
ಶಾಲಾ-ಕಾಲೇಜುಗಳು ತೆರೆದಿವೆ. ಮದುವೆ ಮಂಟಪದಲ್ಲಿ ಸಾವಿರಾರು ಮಂದಿ ಸೇರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಜನ ಓಡಾಡಿಕೊಂಡು ಇದ್ದಾರೆ. ಎಲ್ಲ ಕಡೆ ಜನರಿದ್ದಾರೆ. ಆದರೆ, ಚಿತ್ರಮಂದಿಗಳನ್ನು ಮಾತ್ರ ತೆರೆಯುತ್ತಿಲ್ಲ. ಏಕೆಂದರೆ, ಇದರ ಹಿಂದೆ 5ಜಿ ಉದ್ದೇಶವಿದೆ ಎಂದು ಹೇಳಿದರು.
ಮುಂದುವರಿದು 5ಜಿ ಉದ್ದೇಶದ ಬಗ್ಗೆ ಸ್ಪಷ್ಟನೆ ನೀಡಿದ ದರ್ಶನ್, ಮುಖೇಶ್ ಅಂಬಾನಿ ಅವರು 5ಜಿ ಆರಂಭಿಸಿದ್ದಾರೆ. ಇದೊಂದು ದೊಡ್ಡ ಹಗರಣವೆಂದು ನನಗನಿಸುತ್ತಿದೆ ಎಂದು ಆರೋಪಿಸಿದರು. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದರೆ 5ಜಿ ಉಪಯೋಗಕ್ಕೆ ಬರುವುದಿಲ್ಲ. ಹೀಗಾಗಿ ಮೊಬೈಲ್ಗಳಲ್ಲಿ 5ಜಿ ರನ್ ಆಗಲು ಈ ರೀತಿ ಮಾಡುತ್ತಿರಬಹುದು. ಇದು ನನ್ನ ಅನಿಸಿಕೆಯಾಗಿದೆ. ಆದರೆ, ಯಾವುದೇ ಕಾರಣ ನಾವು ಓಟಿಟಿಗೆ ಕೊಡುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿರಿ: ಅಂಬಾನಿ ಭದ್ರತೆಗೆ ಇರುವ ಅತ್ಯಂತ ದುಬಾರಿ ಪೊಲೀಸ್ ಕಾರು: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಇದೇ ವೇಳೆ ರಾಬರ್ಟ್ ಚಿತ್ರ ಬಿಡುಗಡೆ ಬಗ್ಗೆ ಮಾತನಾಡಿದ ದರ್ಶನ್ ಖಂಡಿತವಾಗಿ ಮಾರ್ಚ್ 11ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮಾರ್ಚ್ನಲ್ಲೇ ಬಿಡುಗಡೆಯಾಗಲಿದೆ ಎಂದು ಭರವಸೆ ನೀಡಿದರು.
ಹೀರೋಗಳು ಏನಂತಾರೆ? … ಓಟಿಟಿಯಲ್ಲಿ ಚಿತ್ರ ಬಿಡುಗಡೆಗೆ ಸ್ಟಾರ್ಗಳ ನಿಲುವೇನು?
ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿ ನಟ ದರ್ಶನ್ ಅಭಿಮಾನಿಗಳಿಗೆ ನೀಡಿದ ಸಂದೇಶ ಹೀಗಿದೆ…