ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ರದ್ದುಗೊಳಿಸಿದ ಕ್ರಮ ಐತಿಹಾಸಿಕವಾದುದು. ಆ ಐತಿಹಾಸಿಕ ಹೆಜ್ಜೆಯಿಂದಾಗಿ “ಪಶ್ಚಿಮದ ನೆರೆಯ ರಾಷ್ಟ್ರ” ನಡೆಸುತ್ತಿದ್ದ “ಛಾಯಾ ಸಮರ”ಕ್ಕೆ ಭಾರಿ ಅಡಚಣೆ ಉಂಟಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಪಾಕಿಸ್ತಾನದ ಹೆಸರು ಉಲ್ಲೇಖಿಸದೆಯೇ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಮಂಗಳವಾರ ನವದೆಹಲಿಯ ಕಾರ್ಯಪ್ಪ ಪರೇಡ್ ಗ್ರೌಂಡ್ನಲ್ಲಿ ನಡೆದ 72ನೇ ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಸಶಸ್ತ್ರ ಪಡೆಗಳು ಯಾವುದೇ ಕಾರಣಕ್ಕೂ ಭಯೋತ್ಪಾದನೆ, ಉಗ್ರಕೃತ್ಯಗಳನ್ನು ಸಹಿಸಿಕೊಂಡಿರಬೇಕಾದ್ದಿಲ್ಲ. ಈ ವಿಷಯದಲ್ಲಿ ಜೀರೋ ಟಾಲರೆನ್ಸ್ ನೀತಿ ಅನುಸರಿಸಬೇಕು. ಭಯೋತ್ಪಾದನೆಯನ್ನು ಬೆಂಬಲಿಸುವವರು ಮತ್ತು ಅದಕ್ಕೆ ಉತ್ತೇಜನ ನೀಡುವವರನ್ನು ಎದುರಿಸಲು ನಮಗೆ ಸಾಕಷ್ಟು ಅವಕಾಶಗಳು, ಆಯ್ಕೆಗಳಿವೆ. ಅವುಗಳನ್ನು ಬಳಸುವುದಕ್ಕೆ ನಮಗೆ ಯಾವುದೇ ರೀತಿಯ ಮುಜುಗರ, ಹಿಂಜರಿಯುವ ಮನೋಭಾವನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. (ಏಜೆನ್ಸೀಸ್)