ಹುಬ್ಬಳ್ಳಿ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಸ್ವಪ್ರತಿಷ್ಠೆ ರಾಜಕೀಯದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಇದರಿಂದಾಗಿ, ಪರ್ಯಾಯ ವ್ಯವಸ್ಥೆ ಬಗ್ಗೆ ಜನ ಒಲವು ತೋರುತ್ತಿದ್ದಾರೆ. ಹಾಗಾಗಿ, ಆಮ್ ಆದ್ಮಿ ಪಕ್ಷ ಈ ಬಾರಿ ಪಂಜಾಬ್ ಮಾದರಿಯಲ್ಲಿ ಭರ್ಜರಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರರಾವ್ ತಿಳಿಸಿದರು.
ಇಲ್ಲಿನ ವಿಕಾಸ ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಎಪಿ ಪಕ್ಷವನ್ನು ಹಳ್ಳಿ ಹಳ್ಳಿಗಳಲ್ಲಿ ಸಂಘಟಿಸಲಾಗುತ್ತಿದೆ. ಯುವ, ಮಹಿಳಾ ಘಟಕ ಸೇರಿದಂತೆ ಹತ್ತು ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಸಾಮಾನ್ಯ ಜನರಿಗೆ ಜವಾಬ್ದಾರಿ ಅವಕಾಶ ನೀಡಲಾಗುತ್ತಿದೆ ಎಂದರು.
ಇನ್ನೂ ಚುನಾವಣೆಯೇ ಆಗಿಲ್ಲ. ಈಗಾಗಲೇ ಒಂದು ಪಕ್ಷದವರು ನಾನು ಸಿಎಂ ನಾನು ಸಿಎಂ ಎಂದು ಹೊಡೆದಾಡುತ್ತಿದ್ದಾರೆ.
ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಯಾವೊಬ್ಬ ರಾಜಕಾರಣೊಯೂ ಈವರೆಗೆ ಬ್ಲೂ ಪ್ರಿಂಟ್ ಹಾಕಿಲ್ಲ ಎಂದರು.
ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ಸೂಚಿಸಿದರೆ ಸ್ಪರ್ಧಿಸುತ್ತೇನೆ.
ನಾನು ರಾಜ್ಯದ ವಿವಿಧೆಡೆ ಪೊಲೀಸ್ ಅಧಿಕಾರಿಯಾಗಿ ರಾಜಕಾರಣಿಗಳನ್ನು ಹತ್ತಿರದಿಂದ ನೋಡಿದ್ದೇನೆ. ಈ ವ್ಯವಸ್ಥೆ ಕಿತ್ತೆಸೆಯಲು ಇಲ್ಲಿಗೆ ಬಂದಿದ್ದೇನೆ ಜನ ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದರು.
ಉತ್ತರ ಕರ್ನಾಟಕದ ಮುಂದಿನ 25-35 ವರ್ಷಗಳ ಅಭಿವೃದ್ಧಿಗೆ ಯಾರ ಬಳಿಯೂ ಸರಿಯಾದ ಪ್ಲಾನ್ ಇಲ್ಲ. ಹಾಗಾಗಿ, ಇಲ್ಲಿನ ಪ್ರತಿಭಾನ್ವಿತರು ಬೇರೆ ಕಡೆಗೆ ಹೋಗುತ್ತಿದ್ದಾರೆ. ಇಲ್ಲಿ ಮೂಲಸೌಕರ್ಯ ಕೊರತೆ ಎದುರಾಗಿದೆ. ಅವಳಿನಗರದಲ್ಲಿ ಕುಡಿಯುವ ನೀರಿನ ನಿರ್ವಹಣೆಯನ್ನು ಖಾಸಗಿಯವರುಗೆ ಕೊಟ್ಟಿರುವುದು ಖಂಡನೀಯ. ಮೊಸರು, ಮಜ್ಜಿಗೆ ಸೇರಿದಂತೆ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದು ಬಡವರ ಮೇಲೆ ಬರೆ ಹಾಕಲಾಗಿದೆ. ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಂಡಿಲ್ಲ. ಸಂಸದರ ಆದರ್ಶ ಗ್ರಾಮಗಳು ಸಹ ಅಭಿವೃದ್ಧಿ ಕಂಡಿಲ್ಲ. ಈ ಭಾಗದ ನಾಯಕರಿಗೆ ಅಭಿವೃದ್ಧಿಯ ದೂರದೃಷ್ಟಿಯೇ ಇಲ್ಲ. ಕೇವಲ ಕಮಿಷನ್ ರಾಜಕೀಯ ಮಾಡಿಕೊಂಡು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಶಾಸಕಾಂಗದ ಬದಲು ಕಾರ್ಯಾಂಗದ ಪಾತ್ರವನ್ನು ಅಧಿಕಾರದಲ್ಲಿರುವ ರಾಜಕಾರಣಿಗಳು ಮಾಡುತ್ತಿದ್ದಾರೆ.
ಯುವಜನರಿಗೆ ಉದ್ಯೋಗ ಕೊಡುತ್ತಿಲ್ಲ. ಈ ಭಾಗದ ಶಾಸಕರು ಬೆಂಗಳೂರಿನಲ್ಲಿ ಐಶಾರಾಮಿ ಜೀವನ ಸಾಗಿಸುತ್ತಿದ್ದಾರೆ. ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣರಾದ ಸಚಿವರಿಗೆ ಕ್ಲೀನ್ ಚಿಟ್ ಕೊಡಲಾಗಿದೆ ಎಂದರು.