ಸಿದ್ದಾಪುರ: ತಗ್ಗು ಪ್ರದೇಶದ ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ಸಿಗ್ತಿಲ್ಲ ಎಂದು ರಾತ್ರಿ ವೇಳೆ ಗುಡ್ಡ ಏರಿದ್ದ ಯುವಕನನ್ನು ಕಾಡು ಪ್ರಾಣಿ ಎಂದು ಭಾವಿಸಿ ಬೇಟೆಗಾರ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ.
ಕವಲಕೊಪ್ಪ ಗ್ರಾಮದ ಗೊಂಟನಾಳದಲ್ಲಿ ಗುರುವಾರ ರಾತ್ರಿ ಈ ಅಚಾತುರ್ಯ ನಡೆದಿದ್ದು, ಕುಂಬಾರಕುಳಿ ಮೂಲದ ಗೊಂಟನಾಳ ನಿವಾಸಿ ಪ್ರದೀಪ್ ನಾರಾಯಣ್ ಗೌಡ ಗಾಯಗೊಂಡಿದ್ದಾನೆ. ಕಾಲೇಜು ವಿದ್ಯಾರ್ಥಿಯಾದ ಈತ ಮೊಬೈಲ್ ಮೂಲಕ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ನೆಟ್ವರ್ಕ್ ಹುಡುಕಿಕೊಂಡು ರಾತ್ರಿ ವೇಳೆ ಗುಡ್ಡ ಏರಿದ್ದ.
ಇದನ್ನೂ ಓದಿರಿ ಎಲ್ಕೆಜಿ, ಯುಕೆಜಿ ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಬ್ರೇಕ್ ಹಾಕಲಿದೆಯೇ ನಿಮ್ಹಾನ್ಸ್ ವರದಿ ?
ಗುಡ್ಡದ ಮೇಲೆ ನೆಟ್ವರ್ಕ್ ಸಿಕ್ಕಿತ್ತೆಂದು ಮೊಬೈಲ್ ನೋಡುತ್ತ ಅಲ್ಲೇ ಕುಳಿತ್ತಿದ್ದ ಯುವಕನನ್ನು ದೂರದಿಂದಲೇ ನೋಡಿದ ಬೇಟೆಗಾರ ಕವಲಕೊಪ್ಪ ಗೊಂಟನಾಳದ ರಾಮಾ ಕನ್ನಾ ನಾಯ್ಕ, ಯಾವುದೋ ಕಾಡುಪ್ರಾಣಿ ಎಂದು ಭಾವಿಸಿ ಗುಂಡು ಹಾರಿಸಿದ್ದಾನೆ. ಯುವಕನ ಬಲ ಮೊಣಕಾಲು ಹಾಗೂ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ಗಾಯವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಪಿಐ ಪ್ರಕಾಶ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿರಿ ಜೀವಂತ ವಿದ್ಯಾರ್ಥಿಗೆ ಇನ್ಸ್ಟಾಗ್ರಾಂನಲ್ಲಿ ಶ್ರದ್ಧಾಂಜಲಿ ಕೋರಿದ ಕಿಡಿಗೇಡಿ