ಮುಂಬೈ: ದೆಹಲಿಯ ಜೆಎನ್ಯುದಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಹಿಳೆಯೋರ್ವರು ಹಿಡಿದಿದ್ದ ಪೋಸ್ಟರ್ವೊಂದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಜೆಎನ್ಯು ಹಿಂಸಾಚಾರ ವಿರೋಧಿ ಪ್ರತಿಭಟನೆಯಲ್ಲಿ ಈ ಮಹಿಳೆ Free Kashmir ( ಸ್ವತಂತ್ರ ಕಾಶ್ಮೀರ) ಎಂಬ ಪೋಸ್ಟರ್ ಹಿಡಿದಿದ್ದರು. ಇದನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಮುಖಂಡರು, ಜೆಎನ್ಯು ಸಂಬಂಧ ಪ್ರತಿಭಟನೆಯಲ್ಲಿ ಕಾಶ್ಮೀರ ವಿಚಾರವೇಕೆ. ಕಾಶ್ಮೀರ ವಿಮುಕ್ತಿಗೊಳಿಸಿ ಎಂಬಂತಹ ಪೋಸ್ಟರ್ ಏಕೆ? ಇದು ಪ್ರತ್ಯೇಕತಾವಾದಿಗಳ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಮಹಿಳೆಯನ್ನು ವಿಚಾರಣೆಗೆ ಒಳಪಡಿಸುವುದಕ್ಕೋಸ್ಕರ ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಕಾಶ್ಮೀರಕ್ಕೆ ಸಂಬಂಧಪಟ್ಟ ಪೋಸ್ಟರ್ ಹಿಡಿದುಕೊಂಡಿದ್ದಾಗಿ ಮಹಿಳೆ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ಪೋಸ್ಟರ್ ಕಾಣಿಸುತ್ತಿರುವ ಎಲ್ಲ ವಿಡಿಯೋಗಳು, ಫೂಟೇಜ್ಗಳನ್ನೂ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಫ್ರೀ ಕಾಶ್ಮೀರ್ ಪೋಸ್ಟರ್ ಹಿಡಿದ ಮಹಿಳೆ ಮಾಧ್ಯಮವೊಂದರ ಬಳಿ ಮಾತನಾಡಿ, ಕಳೆದ ಆರು ತಿಂಗಳಿಂದಲೂ ಕಾಶ್ಮೀರಿಗಳ ಮೇಲೆ ನಿಯಂತ್ರಣ ಹೇರಲಾಗಿದೆ. ಅವರಿಗೆ ಮೂಲ ಮಾನವ ಹಕ್ಕುಗಳನ್ನು ನೀಡಲು ಆಗ್ರಹಿಸಿ ಈ ಪೋಸ್ಟರ್ ಹಿಡಿದಿದ್ದಾಗಿ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಂಬೈನಲ್ಲಿ ಇಂತಹ ಪ್ರತ್ಯೇಕತಾವಾದಿಗಳು ಹೇಗೆ ಹುಟ್ಟಿಕೊಂಡಿದ್ದಾರೆ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ನಿಜಕ್ಕೂ ಪ್ರತಿಭಟನೆ ನಡೆಯುತ್ತಿರುವುದು ಯಾಕೆ. ಇಲ್ಲಿ ಕಾಶ್ಮೀರದ ವಿಚಾರವೇಕೆ? ಇಂತಹ ಪ್ರತ್ಯೇಕತಾವಾದಿಗಳನ್ನು ಮುಂಬೈನಲ್ಲಿ ನಾವು ಹೇಗೆ ಸಹಿಸಿಕೊಳ್ಳಬೇಕು? ಉದ್ಧವ್ ಜೀ ನೀವು ಇಂತಹ ದೇಶದ್ರೋಹಿ ಪೋಸ್ಟರ್ಗಳನ್ನು ಹಿಡಿದುಕೊಂಡವರನ್ನು ಸಹಿಸಿಕೊಳ್ಳುತ್ತೀರಾ ಎಂದು ದೇವೇಂದ್ರ ಫಡ್ನವೀಸ್ ಪ್ರಶ್ನಿಸಿದ್ದಾರೆ.