ಚಾಮರಾಜನಗರ: ಎರಡು ಎಕರೆ ಜಮೀನಿನಲ್ಲಿ ಬಾಳೆ ಗಿಡಗಳು ಸಮೃದ್ಧವಾಗಿ ಬೆಳೆಯುತ್ತಿರುವ ಖುಷಿಯಲ್ಲಿ ಮಂಗಳವಾರ ರಾತ್ರಿ ಮನೆಗೆ ತೆರೆಳಿದ್ದ ರೈತನಿಗೆ ಬುಧವಾರ ಬೆಳಗ್ಗೆ ಆಘಾತ ಕಾದಿತ್ತು. ರಾತ್ರಿ ಆಕಾಶ ನೋಡುತ್ತಿದ್ದ 2,400 ಬಾಳೆಗಿಡಗಳ ಪೈಕಿ 1,100 ಗಿಡಗಳು ನೆಲಕಚ್ಚಿದ್ದವು.
ಜ್ಯೋತಿಗೌಡನಪುರದ ಜಮೀನಿನಲ್ಲಿ ರೈತ ವೀರಭದ್ರಪ್ಪ ಬೆಳೆದಿದ್ದ ಬೆಳೆಯನ್ನು ಕಾಡುಹಂದಿಗಳು ನಾಶ ಮಾಡಿವೆ. 6 ತಿಂಗಳ ಬಾಳೆ ಗಿಡಗಳಲ್ಲಿ ಎತ್ತರಕ್ಕೆ ಬೆಳೆದ ಗಿಡಗಳೇ ಹೆಚ್ಚು ಹಾನಿಯಾಗಿವೆ.
ಇದನ್ನೂ ಓದಿ ರೈತನಿಂದಲೇ ಟ್ರ್ಯಾಕ್ಟರ್ ಹರಿಸಿ ರೇಷ್ಮೆ ಬೆಳೆ ನೆಲಸಮ
ಕರೊನಾ ಪರಿಣಾಮ ಬಾಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಬೆಳೆಗಾರರು ಕಂಗಾಲಾಗಿದ್ದಾರೆ. ಇದನ್ನು ನೆನೆದು ತಮ್ಮ ಬೆಳೆ ಫಲ ನೀಡಲು ಇನ್ನೂ ಸಮಯವಿದೆ. ಅಷ್ಟರಲ್ಲಿ ಕರೊನಾ ತಗ್ಗಲಿದೆ ಎನ್ನುವ ವಿಶ್ವಾಸದ ಲೆಕ್ಕಾಚಾರದಲ್ಲಿದ್ದ ವೀರಭದ್ರಪ್ಪಗೆ ಕಾಡುಹಂದಿಗಳ ಹಾವಳಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದೆ.
ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನ ಸುತ್ತ ಸೋಲಾರ್ ಬೇಲಿ ಹಾಕಿಸಲು ಹಣದ ಅಭಾವ ಎದುರಾಗಿತ್ತು. ಪ್ರತಿನಿತ್ಯ ಬಾಳೆಬೆಳೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದೆ. ರಾತ್ರಿ ತಡವಾಗಿ ಮನೆಗೆ ತೆರಳಿದೆ. ಬೆಳಗ್ಗೆ ಪಕ್ಕದ ಜಮೀನಿನ ರೈತ ಫೋನ್ ಮಾಡಿ, ‘ನಿನ್ನ ಜಮೀನಿನಲ್ಲಿ ಬಾಳೆ ಕಾಣುತ್ತಿಲ್ಲ’ ಎಂದ. ತಕ್ಷಣ ಸ್ಥಳಕ್ಕೆ ಬಂದು ನೋಡಿ ಕಂಗಾಲಾದೆ ಎಂದು ವೀರಭದ್ರಪ್ಪ ಅಳಲು ತೋಡಿಕೊಂಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ ಗುರುಗ್ರಾಮ್ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!