ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಕ್ಯಾಬ್ ಚಾಲಕರನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಅಖಿಲೇಶ ಮತ್ತು ಹಾಸನದ ದೀಪು ಬಂಧಿತರು. ಆ.31ರಂದು 25 ವರ್ಷದ ಮಹಿಳೆ ಮೇಲೆ ಆರೋಪಿಗಳು ಕೃತ್ಯ ಎಸಗಿದ್ದರು. ಕ್ಯಾಬ್ ಚಾಲಕರಾದ ಆರೋಪಿಗಳು, ವಿವೇಕನಗರ ಸಮೀಪದಲ್ಲೇ ನೆಲೆಸಿದ್ದಾರೆ. ಈಜಿಪುರ ಸಮೀಪದಲ್ಲಿದ್ದ ತಮ್ಮ ನಿವೇಶನವನ್ನು ನೋಡಿಕೊಂಡು ಆ.31ರ ಸಂಜೆ 5 ಗಂಟೆಗೆ ಸಂತ್ರಸ್ತೆ ಮನೆಗೆ ಮರಳುತ್ತಿದ್ದಳು. ಈಜಿಪುರದ ಟೊಯೋಟಾ ಟ್ರಾವೆಲ್ಸ್ ಬಳಿಯ ಚರ್ಚ್ ಮುಂದೆ ಎರಡು ಬೈಕ್ಗಳಲ್ಲಿ ಬಂದ ಆರೋಪಿಗಳು, ಡ್ರಾಪ್ ಕೊಡುವುದಾಗಿ ಬೈಕ್ಗೆ ಹತ್ತಿಸಿಕೊಂಡಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಟಿಯ ಹುಸ್ಕೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಮರುದಿನ ಮುಂಜಾನೆ ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.