ಉಡುಪಿ: ಕಾಲೇಜಿಗೆ ರಜೆ ಹಿನ್ನೆಲೆ ಸ್ನೇಹಿತರೊಂದಿಗೆ ವಿಹಾರಕ್ಕೆಂದು ಬಂದಿದ್ದ ಮೂವರು ಬಿಇ ವಿದ್ಯಾರ್ಥಿಗಳು ಹೂಡೆ ಸಮೀಪದ ಬೀಚ್ನಲ್ಲಿ ಆಟವಾಡಲು ಹೋಗಿ ದುರಂತ ಅಂತ್ಯಕಂಡಿದ್ದಾರೆ. ಮೃತರೆಲ್ಲರೂ ಮಣಿಪಾಲ ಎಂಐಟಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು.
ಭಾನುವಾರ ರಜಾ ದಿನವಾದ್ದರಿಂದ ಮಣಿಪಾಲದ 15ಕ್ಕೂ ಅಧಿಕ ವಿದ್ಯಾರ್ಥಿಗಳು ಹೂಡೆ ಬೀಚ್ಗೆ ವಿಹಾರಕ್ಕೆಂದು ಬಂದಿದ್ದರು. ಕೆಲವರು ಸಮುದ್ರ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ, ಬೃಹತ್ ಗಾತ್ರದ ಅಲೆ ಅಪ್ಪಳಿಸಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಈ ಪೈಕಿ ಬೆಂಗಳೂರಿನ ನಿಶಾಂತ್(21) ಹಾಗೂ ಷಣ್ಮುಗ(21) ಅವರನ್ನು ಹೊರಗೆ ಕರೆತರಲಾಯಿತ್ತಾದರೂ ಬದುಕಲಿಲ್ಲ. ನೀರಲ್ಲಿ ಮುಳುಗಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹೈದರಾಬಾದ್ನ ಶ್ರೀಕರ್(21) ನೀರಲ್ಲಿ ನಾಪತ್ತೆಯಾಗಿದ್ದ. ಶ್ರೀಕರ್ಗಾಗಿ ಶೋಧಕಾರ್ಯ ಮುಂದುವರಿದಿತ್ತು. ಸೋಮವಾರ ಬೆಳಗ್ಗೆ ಶ್ರೀಕರ್ ಮೃತದೇಹ ಪತ್ತೆಯಾಗಿದೆ. ಮೂವರ ಸಾವಿನ ಸುದ್ದಿ ಕೇಳಿ ಸಹಪಾಠಿಗಳು ಆಘಾತಗೊಂಡಿದ್ದಾರೆ.