ನವದೆಹಲಿ: ರಾಜ್ಯದಲ್ಲಿ ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ರದ್ದತಿ ಪ್ರಶ್ನಿಸಿ ಪೊಲೀಸ್ ಮಹಾಸಂಘ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಹಿಂದೇಟು ಹಾಕಿದ್ದ ಸುಪ್ರೀಂಕೋರ್ಟ್, ಸೋಮವಾರ ಈ ಅರ್ಜಿಯನ್ನು ವಜಾ ಮಾಡಿದೆ. ಅಲ್ಲದೆ, ಎಸಿಬಿ ರದ್ದತಿ ಪ್ರಶ್ನಿಸಿ ಅರ್ಜಿ ಸಲ್ಲಿಸಲು ನೀವು ಯಾರು? ನೀವು ಸಂತ್ರಸ್ತರೇ, ನಿಮಗೇನು ಸಮಸ್ಯೆ ಆಗಿದೆ? ಎಂದ ನ್ಯಾಯಪೀಠ ಪ್ರಶ್ನಿಸಿದೆ.
ಏನೇ ಆಕ್ಷೇಪಣೆಗಳಿದ್ದರೂ ರಾಜ್ಯ ಸರ್ಕಾರ ಅಥವಾ ಸಂಬಂಧಪಟ್ಟವರು ಸಲ್ಲಿಸುತ್ತಾರೆ. ನಿಮ್ಮ ಅರ್ಜಿಯನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್, ಅರ್ಜಿ ಹಿಂತೆಗೆದುಕೊಳ್ಳುವಂತೆ ಸೂಚಿಸಿತು. ಈ ಹಿನ್ನೆಲೆಯಲ್ಲಿ ಪೊಲೀಸ್ ಮಹಾಸಂಘದ ಪರ ವಕೀಲರು ಅರ್ಜಿಯನ್ನು ಹಿಂಪಡೆದರು. ಹೈಕೋರ್ಟ್ ತೀರ್ಪಿನಿಂದ ನೈಜ ಸಂತ್ರಸ್ತರು ಇದ್ದರೆ ಅರ್ಜಿ ಹಾಕಬಹುದು, ಆಗ ವಿಚಾರಣೆ ನಡೆಸಬಹುದು. ಹೀಗೆಲ್ಲ ಯಾರ್ಯಾರೋ ಅರ್ಜಿ ಹಾಕುವಂತಿಲ್ಲ ಎಂದು ಕಕ್ಷಿದಾರರಿಗೆ ತಿಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತು.
ಲೋಕಾಯುಕ್ತ ವ್ಯಾಪ್ತಿಗೆ ಎಸಿಬಿ ಸೇರ್ಪಡೆ ಮಾಡಿ 2022ರ ಆಗಸ್ಟ್ 11ರಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಎಸಿಬಿ ರಚನೆ ಮಾಡಿ 2016ರ ಮಾ.14ರಂದು ಹೊರಡಿಸಿರುವ ಆದೇಶ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಇದ್ದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದು 2016ರ ಮಾ.19ರಂದು ಹೊರಡಿಸಿರುವ ಅಧಿಸೂಚನೆಯನ್ನು ಸರ್ಕಾರ ಸರಿಯಾಗಿ ಸಮರ್ಥಿಸಿಕೊಂಡಿಲ್ಲ. ಆದ್ದರಿಂದ, ಸರ್ಕಾರದ ಅಧಿಸೂಚನೆಗಳನ್ನು ರದ್ದುಪಡಿಸಲಾಗುತ್ತಿದೆ ಎಂದು ಹೇಳಿದ್ದ ಹೈಕೋರ್ಟ್, ಎಸಿಬಿ ಮುಂದಿರುವ ಎಲ್ಲ ಪ್ರಕರಣಗಳನ್ನೂ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಹೈಕೋರ್ಟ್ ಆದೇಶದ ಮೇರೆಗೆ ಎಸಿಬಿಯನ್ನು 2022ರ ಸೆ.9ರಂದು ಅಧಿಕೃತವಾಗಿ ರದ್ದು ಪಡಿಸಿದ ರಾಜ್ಯ ಸರ್ಕಾರ, ಎಸಿಬಿ ತನಿಖೆ ನಡೆಸುತ್ತಿದ್ದ ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡಿದೆ. ಎಸಿಬಿ ರದ್ದತಿಯನ್ನ ಪ್ರಶ್ನಿಸಿ ಪೊಲೀಸ್ ಮಹಾಸಂಘ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿತ್ತು.
ಕುಂಬಳೆ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ‘ದೇವರ ಮೊಸಳೆ’ ಬಬಿಯಾ ಇನ್ನಿಲ್ಲ
ನನ್ನ ಬಹುಕಾಲದ ಸ್ನೇಹಿತ- ಸಹೋದ್ಯೋಗಿ ಮುಲಾಯಂ ಸಿಂಗ್ರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ… ಕಂಬನಿ ಮಿಡಿದ ಎಚ್ಡಿಡಿ