ಉಪ್ಪಿನಂಗಡಿ: ಧರ್ಮಸ್ಥಳದ ವಸತಿ ನಿಲಯದಲ್ಲಿ ರೂಂ ಸಿಗಲಿಲ್ಲವೆಂದು ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಗದಗ ಮೂಲದ ಭಿನ್ನ ಮತೀಯ ಯುವಕ-ಯುವತಿಯನ್ನು ಹಿಂದು ಸಂಘಟನೆ ಕಾರ್ಯಕರ್ತರು ಕಾಪಿನಬಾಗಿಲು ಎಂಬಲ್ಲಿ ಶುಕ್ರವಾರ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗದಗ ನಿವಾಸಿ ರಫೀಕ್(26) ಎಂಬಾತ ತನ್ನ ಊರಿನ 28ರ ಹರೆಯದ ಹಿಂದು ಯುವತಿ ಜತೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದು ವಸತಿ ನಿಲಯದಲ್ಲಿ ತಂಗಲು ಮುಂದಾಗಿದ್ದ. ಇವರ ಹೆಸರು ಮತ್ತು ಮತ ಹೊಂದಾಣಿಕೆಯಾಗದ್ದನ್ನು ಕಂಡು ವಸತಿ ನಿಲಯದವರು ಕೊಠಡಿ ನೀಡಲು ನಿರಾಕರಿಸಿದರು. ಬಳಿಕ ಖಾಸಗಿ ವಸತಿ ನಿಲಯಕ್ಕೆ ಹೋದ ಇವರಿಗೆ ಅಲ್ಲಿಯೂ ರೂಂ ದೊರಕಲಿಲ್ಲ. ಬೇಸತ್ತ ಇವರು ಸುಬ್ರಹ್ಮಣ್ಯಕ್ಕೆ ಹೋಗಲು ಯತ್ನಿಸುತ್ತಿದ್ದರು. ಅಷ್ಟರಲ್ಲಿ ಮಾಹಿತಿ ಪಡೆದ ಹಿಂದು ಸಂಘಟನೆ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪಿನಬಾಗಿಲು ಎಂಬಲ್ಲಿ ತಡೆದಿದ್ದಾರೆ.
ಪೊಲೀಸರು ಯುವತಿಯ ಕಡೆಯವರನ್ನು ಸಂಪರ್ಕಿಸಿ ಆಕೆಯ ಬಂಧುಗಳನ್ನು ಕರೆಸಿ ಅವರೊಂದಿಗೆ ಕಳುಹಿಸಿಕೊಟ್ಟರು. ರಫೀಕ್ಗೆ ಎಚ್ಚರಿಕೆ ಕೊಟ್ಟು ಊರಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.