ಹೊಸೂರು: ನಗರದ ಬಾಗಲೂರು ರಸ್ತೆಯಲ್ಲಿನ ಮುತ್ತೂಟ್ ೈನಾನ್ಸ್ ಸಂಸ್ಥೆಯಲ್ಲಿ ಸಿಬ್ಬಂದಿಯನ್ನು ಕಟ್ಟಿಹಾಕಿ ಹಾಡಹಗಲೇ ಚಿನ್ನಾಭರಣ ಲೂಟಿ ಮಾಡಿರುವ ದರೋಡೆಕೋರರು ಅಂದಾಜು 7 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ 96 ಸಾವಿರ ರೂ. ನಗದು ದೋಚಿದ್ದಾರೆ ಎಂದು ಕಂಪನಿ ದೂರು ದಾಖಲಿಸಿದೆ.
ಶುಕ್ರವಾರ ಬೆಳಗ್ಗೆ 9.30ಕ್ಕೆ ಕಂಪನಿ ವ್ಯವಸ್ಥಾಪಕ ಸೇರಿ ಇತರ ಸಿಬ್ಬಂದಿ ಬಾಗಿಲು ತೆರೆದು ಒಳಹೋದಾಗ ದಿಢೀರನೇ ಸುತ್ತುವರಿದ ನಾಲ್ಕೈದು ಮುಸುಕುಧಾರಿಗಳು ತುಪಾಕಿ ತೋರಿಸಿ ಬೆದರಿಸಿದ್ದಾರೆ. ಮಿಸುಕಾಡಿದರೆ ಕೊಲ್ಲುವುದಾಗಿ ಹೆದರಿಸಿ ಎಲ್ಲರನ್ನೂ ಹಗ್ಗದಿಂದ ಕಟ್ಟಿಹಾಕಿದ್ದಾರೆ. ಸಿಬ್ಬಂದಿ ಎದುರಿಗೆ ಸ್ಟ್ರಾಂಗ್ ರೂಂ ನಲ್ಲಿದ್ದ ಚಿನ್ನಾಭರಣವನ್ನು ಚೀಲದಲ್ಲಿ ತುಂಬಿಕೊಂಡು ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದಾರೆ.
ಗ್ರಾಹಕನ ಮೇಲೆ ಹಲ್ಲೆ: ಚಿನ್ನಾಭರಣ ದೋಚುವ ವೇಳೆ ಗ್ರಾಹಕರೊಬ್ಬರು ಕಂಪನಿಗೆ ಕಾಲಿಟ್ಟಿದ್ದಾರೆ. ತಕ್ಷಣವೇ ಅವರ ಮೇಲೆ ಹಲ್ಲೆ ನಡೆಸಿ ಗ್ರಾಹಕನನ್ನೂ ಕಟ್ಟಿಹಾಕಿದ್ದಾರೆ. ದರೋಡೆಕೋರರ ಕೃತ್ಯಕ್ಕೆ ಸಿಬ್ಬಂದಿ ಹಾಗೂ ಗ್ರಾಹಕ ಮೂಕಪ್ರೇಕ್ಷಕರಾಗಿದ್ದಾರೆ.
5 ತನಿಖಾ ತಂಡ ರಚನೆ: ಸುದ್ದಿ ತಿಳಿಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಡಿಎಸ್ಪಿ ಮುರುಳಿ, ಕೃಷ್ಣಗಿರಿ ಎಸ್ಪಿ ಪಾಂಡಿ ಗಂಗಾಧರ್ ಮತ್ತಿತರ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸಿಪ್ಕಾಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 5 ತನಿಖಾ ತಂಡ ರಚಿಸಿದ್ದು ಪೊಲೀಸರು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬೆಂಗಳೂರಿನತ್ತ ಗ್ಯಾಂಗ್!: ಅಡವಿಟ್ಟುಕೊಂಡಿರುವ ಚಿನ್ನಾಭರಣಗಳಲ್ಲಿ ಜಿಪಿಆರ್ಎಸ್ ಎಲೆಕ್ಟ್ರಾನಿಕ್ ಡಿವೈಸೈರ್ ಅಳವಡಿಸಿದ್ದು, ಲೂಟಿಗ್ಯಾಂಗ್ ಚಿನ್ನಾಭರಣದೊಂದಿಗೆ ಬೆಂಗಳೂರಿಗೆ ಕಡೆಗೆ ಸಾಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.