ಬೆಂಗಳೂರು: ರಾಷ್ಟ್ರಧ್ವಜಕ್ಕೆ ಬಿಜೆಪಿ ಗೌರವ ಕೊಡಬೇಕೆಂದರೆ ಸಚಿವ ಈಶ್ವರಪ್ಪ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ ಖರ್ಗೆ, ಈಶ್ವರಪ್ಪನವರ ರಾಜೀನಾಮೆ ತೆಗೆದುಕೊಳ್ಳಲು ಯಾಕೆ ಆಗುತ್ತಿಲ್ಲ? ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಸಹಾಯಕರಾಗಿ ಅದ್ಹೇಕೆ ಕೂತಿದ್ದಾರೆ ಎಂದು ಗೊತ್ತಿಲ್ಲ . ರಾಜೀನಾಮೆ ಕೊಡಲು ಈಶ್ವರಪ್ಪ ಸಿದ್ಧವಿಲ್ಲ ಅಂದ್ರೆ, ಸಿಎಂ ಅವರೇ ವಜಾ ಮಾಡಲಿ. ಬಿಜೆಪಿ ಹೈಕಮಾಂಡ್ ಮತ್ತು ನಳಿನ್ ಕುಮಾರ್ ಕಟೀಲ್ ಏನು ಮಾಡುತ್ತಿದ್ದಾರೆ. ನನಗೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ನೋಡಿದರೆ ಅಯ್ಯೋ ಅನಿಸುತ್ತೆ. ಬಿಟ್ಕಾಯಿನ್ ವಿಚಾರ ಬಂದರೂ ಬಾಯಿ ಬಿಡಲಿಲ್ಲ. ಕನಿಷ್ಠ ಪ್ರಿಯಾಂಕ್ ಖರ್ಗೆ ಹೇಳಿದ್ದು ಸುಳ್ಳು ಅಂತ ಆದರೂ ಬಾಯಿ ಬಿಡಬೇಕಲ್ಲವೇ? ಎಂದು ಟೀಕಿಸಿದರು.
ಇವತ್ತು ಧ್ವಜ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ನಾಳೆ ಸಂವಿಧಾನ, ದೇಶದ ಹೆಸರು ಬದಲಾವಣೆ ಮಾಡಬಹುದು. ಬಿಜೆಪಿಯವರದ್ದು ಬೋಗಸ್ ದೇಶಭಕ್ತಿ. ಇವರು ದೇಶಭಕ್ತರಲ್ಲ, ದೇಶದ್ರೋಹಿಗಳು. ಬಿಜೆಪಿ ದೇಶದ ಪರವಾಗಿದೆ ಅನ್ನೋದಾದರೆ ಮೊದಲು ಈಶ್ವರಪ್ಪರನ್ನ ವಜಾ ಮಾಡಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಬಹಳ ಸ್ಪಷ್ಟವಾಗಿದೆ. ಸದನದಲ್ಲಿ ಕೂಡ ಯು.ಟಿ. ಖಾದರ್ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕುಂದಾಪುರದಿಂದ ಕಲಬುರಗಿವರೆಗೆ ಈ ವಿವಾದ ಹಬ್ಬಿದೆ ಅಂದ್ರೆ ಅದು ಸರ್ಕಾರದ ವೈಫಲ್ಯ. ಧಾರ್ಮಿಕ ಸಂಕೇತಗಳನ್ನು ಧರಿಸಲು ಸಂವಿಧಾನದಲ್ಲಿ ಅವಕಾಶವಿದೆ. ಕರೊನಾ, ಲಾಕ್ಡೌನ್ ಬಳಿಕ ನಾವು ಗಮನ ಕೊಡಬೇಕಾಗಿದ್ದು ಶಿಕ್ಷಣ ಕಡೆಗೆ. ಆದರೆ ಸರ್ಕಾರ ಇಂಥ ಚಟುವಟಿಕೆಗಳಿಗೆ ಆಸ್ಪದ ಮಾಡಿಕೊಡ್ತಿದೆ ಎಂದು ಆರೋಪಿಸಿದರು.
ಕರೊನಾ, ನಿರುದ್ಯೋಗ ಮತ್ತು ರಾಜ್ಯದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಬಗ್ಗೆ ಡೈವರ್ಟ್ ಮಾಡುವ ಉದ್ದೇಶದಿಂದ ಸರ್ಕಾರ ಈ ಗೊಂದಲ ಸೃಷ್ಟಿಸಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಉಡುಪಿ ವಕೀಲನಿಗೆ ಜೀವಾವಧಿ ಶಿಕ್ಷೆ: ಸಂತ್ರಸ್ತ ಕುಟುಂಬಕ್ಕೆ ಕೊನೆಗೂ ಸಿಕ್ತು ನ್ಯಾಯ
ಕೋಟಿ ಬೆಲೆ ಬಾಳುವ ಅಡಕೆ ತೋಟಕ್ಕೆ ಬರೀ 15 ಲಕ್ಷ ರೂ. ಪರಿಹಾರ! ರೈಲ್ವೆ ಮಾರ್ಗಕ್ಕೆ ಭೂಮಿ ಕೊಟ್ಟ ರೈತ ಆತ್ಮಹತ್ಯೆ