ನಂದಗುಡಿ: ಹೋಬಳಿಯ ಬನಹಳ್ಳಿ ಗ್ರಾಮದಲ್ಲಿ ಹಲವಾರು ದಶಕಗಳಿಂದ ಸಮರ್ಪಕ ರಸ್ತೆ ಇಲ್ಲದೆ ನಾಗರಿಕರು ಪರದಾಡುವಂತಾಗಿದೆ.
ಈ ರಸ್ತೆ ವಡ್ಡಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಮಳೆ ಬಂದಾಗ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ವಾಹನ ಸವಾರರ ದುಸ್ಥಿತಿ ಹೇಳತೀರದಾಗಿದೆ. ಈ ಭಾಗದಲ್ಲಿ ಸುಮಾರು 70ಕ್ಕೂ ಅಧಿಕ ಮನೆಗಳಿದ್ದು, ಮುಖ್ಯರಸ್ತೆಯಿಂದ ಈ ಮನೆಗಳಿಗೆ ತೆರಳಬೇಕಾದರೆ ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡಬೇಕಿದೆ.
ಗ್ರಾಮದಲ್ಲಿ ಸಾಕಷ್ಟು ಜನರು ಹೈನುಸಾಕಣೆ ಮಾಡಲಿದ್ದು, ಹಾಲನ್ನು ಡೇರಿಗೆ ಸರಬರಾಜು ಮಾಡಲು, ದಿನ ಪತ್ರಿಕೆ ಹಾಕುವವರು ಇದೇ ರಸ್ತೆಯಲ್ಲಿ ಸಂಚಾರ ಮಾಡಬೇಕಿದೆ. ಆದರೆ ಮಳೆ ಬಂದಾಗ ಹಲವಾರು ಜನರು ರಸ್ತೆಯಲ್ಲಿ ಜಾರಿಬಿದ್ದ ನಿದರ್ಶನಗಳು ಸಾಕಷ್ಟಿವೆ.
ಈ ರಸ್ತೆಗೆ ಕಾಂಕ್ರೀಟ್ ಹಾಕಲು ಹಲವಾರು ಬಾರಿ ಭೂಮಿಪೂಜೆ ನೆರವೇರಿಸಿದರೂ ರಾಜಕೀಯ ಲೆಕ್ಕಾಚಾರದಿಂದ ಇಲ್ಲಿ ಮಾಡಬೇಕಾದ ರಸ್ತೆ ಕಾಮಗಾರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಸ್ಥಳೀಯರು ಅಳಲನ್ನು ತೋಡಿಕೊಂಡಿದ್ದಾರೆ.
ಅಲ್ಲದೆ ರಸ್ತೆ ದುರಸ್ತಿ ಬಗ್ಗೆ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರೂ ರಸ್ತೆ ದುರಸ್ಥಿ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಆರೋಪಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮಾತ್ರ ಮತ ಕೇಳಲು ಬರುವ ಅಭ್ಯರ್ಥಿಗಳು ಗೆದ್ದ ನಂತರ ಮೂಲಸೌಕರ್ಯ ಕಲ್ಪಿಸಲು ಮೀನಮೇಷ ಎಣಿಸುತ್ತಾರೆ. ರಸ್ತೆ ಹದಗೆಟ್ಟಿರುವುದರಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ. ಆದಷ್ಟು ಬೇಗ ರಸ್ತೆ ದುರಸ್ತಿ ಮಾಡದಿದ್ದರೆ ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು.
ಕೃಷ್ಣಪ್ಪ, ಗ್ರಾಮಸ್ಥರಸ್ತೆ ದುರಸ್ತಿ ಮಾಡಲು ಎಂಟಿಬಿ ನಾಗರಾಜ್ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಭೂಮಿಪೂಜೆ ಸಲ್ಲಿಸಲಾಗಿತ್ತು. ಆದರೆ ರಸ್ತೆ ಕಾಮಗಾರಿಗೆ ಅಕ್ಕಪಕ್ಕದವರು ಅಡ್ಡಿಪಡಿಸಿದ್ದಾರೆ. ಕೆಲವೆ ಜನರ ಕಿರಿಕಿರಿಗೆ ರಸ್ತೆ ಅಭಿವೃದ್ಧಿ ಕ್ಷೀಣಿಸಿದೆ. ಈಗಾಗಲೇ ಶಾಸಕರು ಸ್ಥಳ ಪರಿಶೀಲನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಶಾಸಕರೊಂದಿಗೆ ಚರ್ಚಿಸಿ ರಸ್ತೆ ದುರಸ್ತಿ ಮಾಡಲಾಗುವುದು.
ಹರೀಶ್, ಗ್ರಾಪಂ ಮಾಜಿ ಉಪಾಧ್ಯಕ್ಷ