ಕೆ.ಆರ್.ನಗರ: ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕಿದ್ದವರೇ ಮಾಡಬಾರದ್ದು ಮಾಡಿದ್ರೆ ಏನು ಹೇಳೋದು? ಹಣದ ಆಸೆಗಾಗಿ ವಕೀಲನೊಬ್ಬ ಬರೋಬ್ಬರಿ ಮೂವರು ಮಹಿಳೆಯರನ್ನು ಮದುವೆ ಆಗಿದ್ದಾನೆ.
ಆ ಭೂಪನ ಹೆಸರು ಸಿ.ವಿ.ಸುನೀಲ್ಕುಮಾರ್. ಈತ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಚಂದಗಾಲು ಗ್ರಾಮದವ. ವಕೀಲನಾಗಿರುವ ಸುನೀಲ್ಕುಮಾರ್, ಒಬ್ಬರಿಗೆ ತಿಳಿಯದಂತೆ ಮತ್ತೊಬ್ಬರನ್ನು, ಮತ್ತೊಬ್ಬರಿಗೆ ತಿಳಿಯದಂತೆ ಇನ್ನೊಬ್ಬರನ್ನು… ಹೀಗೆ ಯಾಮಾರಿಸಿ ಮದ್ವೆ ಆಗಿದ್ದಾನೆ. ಈತನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ.
ವಕೀಲ ವೃತ್ತಿ ಮಾಡುತ್ತಿರುವ ಈತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗ್ರಾಮದ ಮಹಿಳೆಯನ್ನು ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಕೆ.ಆರ್.ನಗರ ಸಬ್ರಿಜಿಸ್ಟ್ರಾರ್ ಸಮ್ಮುಖ ಮದುವೆಯಾಗೋಣ ಎಂದು ನಂಬಿಸಿದ. ಸುಳ್ಳು ಪ್ರಮಾಣಪತ್ರ ಮಾಡಿಸಿ ಸಂಸಾರವನ್ನೂ ಆರಂಭಿಸಿದ. ಆದರೆ, ಹಣಕ್ಕಾಗಿ ಚಿತ್ರಹಿಂಸೆ ಮಿತಿ ಮೀರಿತು. ಈ ಬಗ್ಗೆ ಆಕೆ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದಾಗ ಅವರು ಸಂಧಾನ ಮಾಡಿಸಿ 2020ರ ಜೂನ್ 18ರಂದು ಸರಳ ವಿವಾಹ ಮಾಡಿಸಿದ್ದರು.
ಆಕೆಯಿಂದ 5 ಲಕ್ಷ ರೂ. ತೆಗೆದುಕೊಂಡ ಸುನೀಲ್ಕುಮಾರ್, ಮತ್ತೊಂದು ಮದುವೆಗೆ ಒಪ್ಪಿಗೆ ನೀಡು ಎಂದು ಕಾಡಲಾರಂಭಿಸಿದ. ಈ ಬಗ್ಗೆ ಆಕೆ 2020ರ ನ.10 ರಂದು ಕೆ.ಆರ್.ನಗರ ಠಾಣೆಗೆ ದೂರು ನೀಡಿದ್ದಳು. ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ವಜಾಗೊಂಡು ಒಂದು ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ.
ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಮೈಸೂರಿನ ಬಂಬೂಬಜಾರ್ನ ಯುವತಿಯೊಬ್ಬಳನ್ನು ಕೆ.ಆರ್. ನಗರ ತಾಲೂಕಿನ ಪ್ರಸಿದ್ಧ ದೇವಾಲಯವೊಂದರಲ್ಲಿ 2021ರ ಜು.27ರಂದು ಮದುವೆಯಾಗಿದ್ದ. ಮನೆಯನ್ನು ಸ್ವಚ್ಛ ಮಾಡುವ ಸಂದರ್ಭ ಯುವತಿಗೆ ಪತ್ರವೊಂದು ಸಿಕ್ಕಿತ್ತು. ಅದೇನೆಂದು ನೋಡಿದಾಗ ಒಡನಾಡಿ ಸಂಸ್ಥೆಯು ಸುನೀಲ್ಕುಮಾರ್ಗೆ ನೀಡಿದ್ದ ಮೊದಲ ಮದುವೆ ಪ್ರಮಾಣಪತ್ರ ಎಂದು ತಿಳಿದ ಆಕೆಗೆ ಎಲ್ಲವೂ ಅಲ್ಲೋಲ ಕಲ್ಲೋಲ ಅನ್ನಿಸಿಬಿಟ್ಟಿತ್ತು. ಪ್ರಕರಣ ಒಪ್ಪಿಕೊಂಡ ಸುನೀಲ್ಕುಮಾರ್, ಮೊದಲ ಪತ್ನಿಗೆ 6 ಲಕ್ಷ ರೂ. ಪರಿಹಾರ ನೀಡಿದರೆ ಕೇಸು ವಾಪಸ್ ಪಡೆಯುತ್ತಾಳೆ. ಹಾಗಾಗಿ ನೀನು ಹಣ ಕೊಡಬೇಕು. ಇಲ್ಲವಾದರೆ ನಾನು ಅವಳ ಜತೆಯೇ ವಾಸಿಸುವೆ ಎಂದು ತಗಾದೆ ತೆಗೆದಿದ್ದ.
ಮದುವೆಗೆ ಮೊದಲೇ ಎರಡೂವರೆ ಲಕ್ಷ ರೂ. ನೀಡಿದ್ದ ಯುವತಿ(2ನೇ ಹೆಂಡತಿ) ಮತ್ತೆ ಹಣ ನೀಡಲು ಸಮ್ಮತಿಸಲಿಲ್ಲ. ಕಿರುಕುಳ ಹೆಚ್ಚಾದ ಕಾರಣ ಆಕೆ ತವರು ಸೇರಿದಳು. ಈ ಎರಡೂ ಪ್ರಕರಣ ಮುಚ್ಚಿಟ್ಟ ಸುನೀಲ್ಕುಮಾರ್ ಬೆಂಗಳೂರಿನ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು 2021ರ ಡಿ.2 ರಂದು ಬೆಂಗಳೂರಿನಲ್ಲಿ ರಿಜಿಸ್ಟರ್ಡ್ ವಿವಾಹವಾಗಿದ್ದ. ಕೆ.ಆರ್.ನಗರದಲ್ಲಿ ಸಂಸಾರ ಆರಂಭಿಸಿದ ಬೆಂಗಳೂರಿನ ಮಹಿಳೆಗೆ ತನ್ನ ಗಂಡನಿಗೆ ತಾನು 3ನೇ ಪತ್ನಿ ಎಂಬ ಕಟು ಸತ್ಯ ತಿಳಿದಿದೆ. ಅಷ್ಟರಲ್ಲಾಗಲೇ ಆಕೆಯ ಎಟಿಎಂ ಕಾರ್ಡ್ ಪಡೆದಿದ್ದ ಭೂಪ ಸಾಕಷ್ಟು ಹಣವನ್ನು ಡ್ರಾ ಮಾಡಿಕೊಂಡಿದ್ದ. ನೊಂದ ಆಕೆ ಪಟ್ಟಣದ ಪೊಲೀಸ್ ಠಾಣೆಗೆ ಭಾನುವಾರ ರಾತ್ರಿ ದೂರು ನೀಡಿದ್ದಾಳೆ. ಎರಡನೇ ಪತ್ನಿಗೆ ಈ ವಿಷಯ ತಿಳಿದು ಆಕೆಯೂ ಠಾಣೆಯಲ್ಲಿ ಭಾನುವಾರ ದೂರು ನೀಡಿದ್ದಾರೆ. ಇತ್ತ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…
ಮಗನನ್ನು ಅಂಗನವಾಡಿಗೆ ಸೇರಿಸಿದ ಚನ್ನಪಟ್ಟಣದ ಜಡ್ಜ್! ನ್ಯಾಯಾಧೀಶರ ನಡೆ ಕಂಡು ಹುಬ್ಬೇರಿಸಿದ ಸ್ಥಳೀಯರು
ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು