ಬೆಂಗಳೂರು: ಮದುವೆಗಾಗಿ ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ವರನನ್ನು ಹುಡುಕಾಟ ನಡೆಸುತ್ತಿದ್ದ ಬೆಂಗಳೂರಿನ ಯುವತಿಗೆ ವ್ಯಕ್ತಿಯೊಬ್ಬ ಮದ್ವೆ ಆಸೆ ಹುಟ್ಟಿಸಿ ವಂಚಿಸಿದ್ದಾನೆ. ನೊಂದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಸುಧಾಮನಗರದ 29 ವರ್ಷದ ಯುವತಿ ವಂಚನೆಗೆ ಒಳಗಾದವಳು. ಬ್ಯಾಂಕ್ವೊಂದರ ಉದ್ಯೋಗಿಯಾಗಿರುವ ಈಕೆ, ಮ್ಯಾಟ್ರಿಮೋನಿಯಲ್ನಲ್ಲಿ ಸ್ವ-ವಿವರ ಅಪ್ಲೋಡ್ ಮಾಡಿ ವರನ ಹುಡುಕಾಟ ನಡೆಸುತ್ತಿದ್ದರು. 2021ರ ಡಿಸೆಂಬರ್ 30ರಂದು ಯುವತಿಗೆ ಕರೆ ಮಾಡಿದ ರಾಜೇಶ್ ಕುಮಾರ್ ಎಂಬಾತ, ತಾನು ಯುಎಸ್ನಲ್ಲಿ ಸಂಶೋಧಕ. ಮ್ಯಾಟ್ರಿಮೋನಿಯಲ್ನಲ್ಲಿ ನಿಮ್ಮ ಫೋಟೋ ನೋಡಿದೆ. ನನಗೆ ಇಷ್ಟ ಆಗಿದ್ದೀರಿ. ನೀವು ಒಪ್ಪಿದರೆ ಬೆಂಗಳೂರಿಗೆ ಬಂದು ನಿಮ್ಮನ್ನು ಮದುವೆಯಾಗಿ ಬೆಂಗಳೂರಲ್ಲೇ ನೆಲೆಸುವೆ ಎಂದಿದ್ದ.
ಈ ಮಾತನ್ನು ನಂಬಿದ ಯುವತಿ, ಮದುವೆಗೆ ಒಪ್ಪಿದ್ದಳು. ಬಳಿಕ ಯುವತಿ ಮತ್ತು ರಾಜೇಶ್ ನಡುವೆ ಮೊಬೈಲ್ನಲ್ಲಿ ಸಂಭಾಷಣೆ ಶುರುವಾಗಿತ್ತು. ‘ಯುಎಸ್ನಿಂದ ಬರಬೇಕಾದರೆ ಮದುವೆ ಪ್ರಮಾಣ ಪತ್ರ ಮಾಡಿಸಬೇಕು. ಅದಕ್ಕೆ ಬ್ಯಾಂಕ್ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಬೇಕಾಗಿದೆ. ನನ್ನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ರೆ ಅನುಕೂಲ ಆಗುತ್ತೆ…’ ಎಂದು ಯುವತಿಗೆ ಪುಸಲಾಯಿಸಿದ್ದ. ರಾಜೇಶ್ನ ಮಾತು ನಂಬಿದ ಯುವತಿ, ಆತನ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 7.55 ಲಕ್ಷ ರೂ. ವರ್ಗಾವಣೆ ಮಾಡಿದ್ದಳು. ಆದರೆ, ರಾಜೇಶ್ ಮಾತ್ರ ಬೆಂಗಳೂರಿಗೆ ಬರುವ ಯಾವುದೇ ಪ್ಲ್ಯಾನ್ ಮಾಡಿರಲಿಲ್ಲ. ಪದೇಪದೆ ಹಣ ಕೇಳಿದಾಗ ಅನುಮಾನ ಬಂದು ಯುವತಿ, ಕೇಂದ್ರ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮುದ್ದಹನುಮೇಗೌಡ ಬಿಜೆಪಿ ಅಭ್ಯರ್ಥಿ? ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ