More

    ಸಿಹಿತಿಂಡಿ ನೀಡಿಲ್ಲದ ಕಾರಣಕ್ಕೆ ಮುರಿದು ಬಿದ್ದ ವಿವಾಹ

    ಸೋಮವಾರಪೇಟೆ: ಮದುವೆ ಹಿಂದಿನ ದಿನ ಮಾಂಸದೂಟಕ್ಕೆ ಆದ್ಯತೆ ನೀಡಿದ್ದೀರ, ಸಿಹಿತಿಂಡಿ ನೀಡಿಲ್ಲ ಎಂಬ ಕ್ಷ್ಷುಲ್ಲಕ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಪ್ರಸಂಗ ಭಾನುವಾರ ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ನಡೆದಿದೆ.

    ಸಮೀಪದ ಹಾನಗಲ್ಲು ಗ್ರಾಮದ ಸಿದ್ದಾರ್ಥ ಬಡಾವಣೆಯ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕನ ಜತೆ ನಿಶ್ಚಯವಾಗಿದ್ದು, ಅದರಂತೆ ಭಾನುವಾರ ಇಲ್ಲಿನ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ವಿವಾಹ ನಿಗದಿಯಾಗಿತ್ತು.

    ವರ ಇಂಜಿನಿಯರಿಂಗ್ ಪದವೀಧರನಾದರೆ ವಧು ಪದವಿ ಮುಗಿಸಿದ್ದರು. ಇಬ್ಬರು ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದರು. ಶನಿವಾರ ಸಂಜೆ ತುಮಕೂರಿನಿಂದ ವರನ ಕಡೆಯವರು ಮಂಟಪಕ್ಕೆ ಆಗಮಿಸಿದ್ದು, ವಧುವಿನ ಕಡೆಯವರು ಸರಿಯಾಗಿ ಸ್ವಾಗತ ಕೋರಿಲ್ಲ ಎಂಬ ಖ್ಯಾತೆ ತೆಗೆದಿದ್ದಾರೆ. ರಾತ್ರಿಯ ಊಟದ ಸಮಯದಲ್ಲಿ ಮಾಂಸದೂಟದ ಬಗ್ಗೆ ತಕರಾರು ತೆಗದು, ಸಿಹಿತಿಂಡಿ ಇಲ್ಲ ಎಂಬ ಕಾರಣಕ್ಕೆ ಗಲಾಟೆ ಮಾಡಿದ್ದಾರೆ. ಮಂಟಪದಲ್ಲಿಯೇ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆದಿದೆ.

    ಭಾನುವಾರ ಬೆಳಗ್ಗೆ ಅಂತಿಮವಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಭಾನುವಾರ ರಾತ್ರಿ ಮದುವೆಯೇ ಬೇಡ ಎಂದು ಉಂಗುರ ಕಳಚಿಕೊಟ್ಟಿದ್ದ ವರ, ಬೆಳಗ್ಗೆ ನಾನು ಮದುವೆಯಾಗುತ್ತೇನೆ ಎಂದು ಹೊಸ ವರಸೆ ಶುರು ಮಾಡಿದ್ದ.

    ದಿಢೀರ್ ಘಟನಾವಳಿಯಿಂದ ಬೇಸತ್ತ ವಧು ಮದುವೆಯೇ ಬೇಡ ಎಂದು ಪೊಲೀಸರೆದುರು ಹೇಳಿಕೆ ನೀಡಿದಳು. ಮದುವೆಗೆಂದು ಖರ್ಚು ಮಾಡಿರುವ ಹಣವನ್ನು ವರನ ಕಡೆಯವರು ನೀಡಬೇಕೆಂದು ವಧುವಿನ ಕಡೆಯವರು ಠಾಣೆ ಎದುರು ಆಗ್ರಹಿಸಿದರು. ಅಂತಿಮವಾಗಿ ಹಣಕಾಸಿನ ವಿಚಾರವನ್ನು ನೀವುಗಳೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದರು.

    ಒಟ್ಟಾರೆ ಹಲವು ತಿಂಗಳ ಹಿಂದೆಯೇ ನಿಗದಿಯಾಗಿದ್ದ ಮದುವೆ, ಕ್ಷುಲ್ಲಕ ಕಾರಣಕ್ಕೆ ರದ್ದುಗೊಂಡು, ಆಹ್ವಾನಿತರು, ಬಂಧು ಬಳಗದವರಲ್ಲಿ ಬೇಸರ ಮೂಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts