More

    ಇನ್ಮುಂದೆ ವಾರದಲ್ಲಿ 6 ದಿನ ಸಂಚರಿಸಲಿದೆ ಬೆಂಗಳೂರು-ಮಂಗಳೂರು ಎಕ್ಸ್​ಪ್ರೆಸ್​ ರೈಲು

    ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ನಂ.16585/86 ಬೆಂಗಳೂರು-ಮಂಗಳೂರು ಎಕ್ಸ್​ಪ್ರೆಸ್​ (ವಯಾ ಮೈಸೂರು) ರಾತ್ರಿ ರೈಲನ್ನು ವಾರದಲ್ಲಿ 6 ದಿನ ಓಡಿಸಲು ಕೇಂದ್ರ ರೈಲ್ವೆ ಮಂಡಳಿ ಅನುಮತಿಸಿದೆ.

    ನೈಋತ್ಯ ರೈಲ್ವೆಯಿಂದ ಜುಲೈ 27ರಂದು ರೈಲ್ವೆ ಬೋರ್ಡ್​ಗೆ ಈ ಕುರಿಂತೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರ ಬರೆಯಲಾಗಿತ್ತು. ಆ.17ರಂದು ಮಂಡಳಿಯಿಂದ ಉತ್ತರ ಬಂದಿದ್ದು, ಅದರಂತೆ ನಂ.16585/86 ಬೆಂಗಳೂರು-ಮಂಗಳೂರು ಎಕ್ಸ್​ಪ್ರೆಸ್​ ರೈಲಿನ ಸಂಚಾರವನ್ನು 3 ದಿನದಿಂದ 6 ದಿನಕ್ಕೆ ಹೆಚ್ಚು ಮಾಡಲು ಅನುಮತಿ ನೀಡಿದೆ. ಇದೇ ವೇಳೆ ವಾರದಲ್ಲಿ ಮೂರು ಬಾರಿ ಸಂಚರಿಸುತ್ತಿದ್ದ ನಂ.06547/48 ಕೆಎಸ್​ಆರ್​ ಬೆಂಗಳೂರು-ಮಂಗಳೂರು ವಿಶೇಷ ಎಕ್ಸ್​ಪ್ರೆಸ್​ ರೈಲನ್ನು ಈ ರೈಲಿನೊಂದಿಗೆ ವಿಲೀನಗೊಳಿಸಲಾಗಿದೆ. ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿರಂತರವಾಗಿ ಭೂ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆ ಮೇರೆಗೆ ಈ ವಿಶೇಷ ರೈಲನ್ನು ಆರಂಭಿಸಲಾಗಿತ್ತು.

    ಟರ್ಮಿನಲ್​ ಬದಲಾವಣೆ: ನಂ.16585/86 ಕೆಎಸ್​ಆರ್​ ಬೆಂಗಳೂರು- ಮಂಗಳೂರು ಎಕ್ಸ್​ಪ್ರೆಸ್​ ರೈಲಿನ ಟರ್ಮಿನಲ್​ ಸದ್ಯ ಇರುವ ಕೆಎಸ್​ಆರ್​ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಸಿಟಿ ಜಂಕ್ಷನ್​)ನಿಂದ ಎಸ್​ಎಂವಿಬಿ (ಸರ್​ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬೈಯಪ್ಪನಹಳ್ಳಿ)ಗೆ ವಿಸ್ತರಿಸಲಾಗಿದೆ. ಟರ್ಮಿನಲ್​ ಬದಲಾವಣೆಯಾದರೂ ಬೆಂಗಳೂರು ಸಿಟಿ, ಕಂಟೋನ್ಮೆಂಟ್​, ಸಿಟಿ ಮತ್ತು ಕೆಂಗೇರಿ ಸೇರಿದಂತೆ ಈ ಹಿಂದಿನ ಮಾರ್ಗದಲ್ಲಿಯೇ ಸಂಚರಿಸಲಿದೆ.

    ಕಾರವಾರಕ್ಕೂ ವಿಸ್ತರಣೆ ಬೇಡಿಕೆ: ಈ ರೈಲನ್ನು ಕಾರವಾರ ಅಥವಾ ವಾಸ್ಕೋಡಗಾಮ ನಿಲ್ದಾಣಕ್ಕೆ ವಿಸ್ತರಿಸುವ ಕುರಿತಾಗಿಯೂ ಬೇಡಿಕೆ ಕೇಳಿ ಬರುತ್ತಿದೆ. ಈಗಾಗಲೇ ಸಂಸದ ಪ್ರತಾಪಸಿಂಹ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರಿಗೆ ಪತ್ರ ಬರೆದು ವಾಸ್ಕೋಡಗಾಮ ನಿಲ್ದಾಣಕ್ಕೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ. ಆ ಮೂಲಕ ಗೋವಾ-ಮೈಸೂರು ನಡುವೆ ಪ್ರವಾಸಿಗರಿಗೆ ಸಂಚಾರ ಸುಲಭ ಸಾಧ್ಯವಾಗಲಿದೆ ಎನ್ನುವುದು ಸಂಸದರ ಅಭಿಪ್ರಾಯ.

    ದೋಷ ನಿವಾರಣೆ ನೆಪದಲ್ಲಿ ನಕಲಿ ಹೇಯ ಕೃತ್ಯವೆಸಗಿದ ಸ್ವಾಮೀಜಿ-ಪತ್ನಿ! ಐದು ವರ್ಷದಿಂದ ಯುವತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ

    ಮೊಸಳೆ ವೇಗವಾಗಿ ಓಡೋದನ್ನ ಎಂದಾದ್ರೂ ನೋಡಿದ್ದೀರಾ? ಈ ವಿಡಿಯೋ ನೋಡಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts