ವಿಕಾರಾಬಾದ್: ತನ್ನ ಮನೆಗೆ ಹೋಗಲು ಬಸ್ಸಿಲ್ಲವೆಂಬ ಕಾರಣಕ್ಕೆ ಕಳ್ಳನೊಬ್ಬ ಸರ್ಕಾರಿ ಬಸ್ಸನ್ನೇ ಕದ್ದಿರುವ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರಿನಲ್ಲಿ ನಡೆದಿದೆ.
ಭಾನುವಾರ ರಾತ್ರಿ 9 ಗಂಟೆಗೆ ತಾಂಡೂರು ಡಿಪೋದಿಂದ ಓಗಿಪುರಕ್ಕೆ ಟಿಎಸ್ಆರ್ಟಿಸಿ ಬಸ್ ಹೊರಟಿತ್ತು. ಆ ಊರಿಗೆ ಕೊನೆಯ ಬಸ್ ಆಗಿದ್ದ ಅದರಲ್ಲಿ 15 ಜನ ಪ್ರಯಾಣಿಕರು ಕುಳಿತಿದ್ದರು. ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಊಟ ಮಾಡುವುದಕ್ಕೆಂದು ಹೋಟೆಲ್ನಲ್ಲಿ ಕುಳಿತಿದ್ದರು. ಈ ಸಮಯಕ್ಕೆ ಬಸ್ಸಿನ ಡ್ರೈವರ್ ಸೀಟನ್ನು ಹತ್ತಿದ ಕಳ್ಳ ಬಸ್ಸನ್ನು ಸ್ಟಾರ್ಟ್ ಮಾಡಿ ಓಡಿಸಲಾರಂಭಿಸಿದ್ದಾನೆ. ಮೊದಲಿಗೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಆತ ಬಸ್ಸಿನ ಡ್ರೈವರ್ ಅಲ್ಲ ಎನ್ನುವುದು ತಿಳಿದರಲಿಲ್ಲವಂತೆ. ಕಂಠ ಪೂರ್ತಿ ಕುಡಿದಿದ್ದ ಕಳ್ಳ ಬಸ್ಸನ್ನು ಹೇಗೆಂದರೇಗೆ ಓಡಿಸಲಾರಂಭಿಸಿದಾಗ ಪ್ರಯಾಣಿಕರು ಆತನನ್ನು ಕಂಡಕ್ಟರ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆತ ಕಂಡಕ್ಟರ್ಗೆ ಹುಷಾರಿಲ್ಲ. ನೀವು ನನಗೇ ಹಣ ನೀಡಿ ಎಂದು ಹೇಳಿದ್ದಾನೆ. ಅನುಮಾನ ಬಂದ ಪ್ರಯಾಣಿಕರು ಡಿಪೋ ಮ್ಯಾನೇಜರ್ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಇತ್ತ ಊಟ ಮುಗಿಸಿ ಬಂದ ಡ್ರೈವರ್ ಮತ್ತು ಕಂಡಕ್ಟರ್ ತಮ್ಮ ಬಸ್ ಎಲ್ಲಿ ಎಂದು ಹುಡುಕಿದ್ದಾರೆ.
ತನ್ನ ಊರಿಗೆ ಬಸ್ಸನ್ನು ತೆಗೆದುಕೊಂಡು ಹೋದ ಕಳ್ಳ ಬಸ್ಸಿಂದಿಳಿದು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಪ್ರಕಣವನ್ನು ದಾಖಲಿಸಿಕೊಂಡಿದ್ದು ಕಳ್ಳನನ್ನು ಗುರುತಿಸಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್)