ಮಂಗಳೂರು: ಇಂರ್ಟನ್ಶಿಪ್ಗೆಂದು ಬಂದಿದ್ದ ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬರ ಮೇಲೆ ತನ್ನ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ ಮಂಗಳೂರು ಮೂಲದ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ವಿದೇಶಕ್ಕೆ ಪರಾರಿಯಾಗದಂತೆ ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಲೋಕಾಯುಕ್ತ ಮತ್ತು ಎಸಿಬಿ ವಿಶೇಷ ವಕೀಲರಾಗಿದ್ದ ಕೆ.ಎಸ್.ಎನ್. ರಾಜೇಶ್ ಭಟ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿನಿ ಇತ್ತೀಚಿಗೆ ದೂರು ದಾಖಲಿಸಿದ್ದರು. ರಾಜೇಶ್ರ ಕಚೇರಿಯಲ್ಲಿ ಇಂಟರ್ನ್ಶಿಪ್ ಮಾಡಲು ಬಂದಿದ್ದ ವಿದ್ಯಾರ್ಥಿನಿಗೆ ಕಚೇರಿಯಲ್ಲೇ ಲೈಂಗಿಕ ಕಿರುಕುಳ ನೀಡಿದ್ದರು. ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿದ ವರ್ತಿಸಿದರು ಎಂದು ಎಂದು ರಾಜೇಶ್ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದರು. ಈ ಪ್ರಕರಣ ಹೊರ ಬರುತ್ತಿದ್ದಂತೆ ರಾಜೇಶ್ ತಲೆಮರೆಸಿಕೊಂಡಿದ್ದಾರೆ.
ಯುವತಿ ದೂರು ನೀಡುವ ಮುನ್ನ, ಸಂತ್ರಸ್ತೆಗೆ ಕರೆ ಮಾಡಿದ್ದ ರಾಜೇಶ್, ಕೆಲಸಕ್ಕೆ ಬರುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದರು. ಗೊತ್ತಿಲ್ಲದೆ ತಪ್ಪು ಮಾಡಿದೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ದಯವಿಟ್ಟು ಕಚೇರಿಗೆ ಬಾ ಎಂದು ಕಣ್ಣೀರಿಟ್ಟಿದ್ದ ಆಡಿಯೋ ವೈರಲ್ ಆಗಿತ್ತು. ಇದೇ ಪ್ರಕರಣ ಸಂಬಂಧ ಮೊದಲ ಆರೋಪಿ ವಕೀಲ ಕೆ.ಎಸ್.ಎನ್.ರಾಜೇಶ್, ಎರಡನೇ ಆರೋಪಿ ಧ್ರುವ, ಮೂರನೇ ಆರೋಪಿ ಮಹಾಲಕ್ಷ್ಮೀ ಹೆಗ್ಡೆ ಹಾಗೂ ಇನ್ನೊಂದು ಪ್ರಕರಣದಲ್ಲಿ ಪವಿತ್ರಾ ಆಚಾರ್ಯ ಎಂಬುವರ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ರಾಜೇಶ್ ಪತ್ತೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಆರೋಪಿ ದೇಶ ಬಿಟ್ಟು ಹೋಗದಂತೆಯೂ ಎಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಜೇಶ್ ವಿರುದ್ಧ ಅ.18ರಂದು ವಿದ್ಯಾರ್ಥಿನಿ ದೂರು ನೀಡಿದ್ದಾರೆ. 20 ದಿನ ಕಳೆದರೂ ಆರೋಪಿ ಮಾತ್ರ ಪೊಲೀಸರಿಗೆ ಇನ್ನೂ ಸಿಕ್ಕಿಲ್ಲ. ರಾಜೇಶ್ ಭಟ್ ವಿದೇಶಕ್ಕೆ ಪರಾರಿಯಾಗದಂತೆ ಪೊಲೀಸರು ಬೇಹುಗಾರಿಕಾ ಸಂಸ್ಥೆಯ (ಐಬಿ) ಮೂಲಕ ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಅವರ 12 ಬ್ಯಾಂಕ್ ಅಕೌಂಟ್ಗಳನ್ನು ಫ್ರೀಝ್ ಮಾಡಲಾಗಿದೆ.
ಇಂಟರ್ನ್ಶಿಪ್ ವಿದ್ಯಾರ್ಥಿನಿಗೆ ಹಿರಿಯ ವಕೀಲನಿಂದ ಲೈಂಗಿಕ ಕಿರುಕುಳ: ಪ್ರಕರಣ ತಿರುಚಲು ಹೋಗಿ ಸಿಕ್ಕಿಬಿದ್ದ ಮಹಿಳೆ
ಯುವತಿಗೆ ಲೈಂಗಿಕ ಕಿರುಕುಳ: ವಕೀಲ ಕೆ.ಎಸ್.ಎನ್. ರಾಜೇಶ್ ಸನ್ನದು ಅಮಾನತು