ಬೆಂಗಳೂರು: ಮುಂಗಾರು ಮಳೆ ಜೋರಾಗಿದ್ದು, ಗಗನಚುಕ್ಕಿ-ಭರಚುಕ್ಕಿ ಜಲಪಾತದಲ್ಲಿ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುತ್ತಿದ್ದು, ರುದ್ರರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಬಹುತೇಕರು ಪ್ರಕೃತಿ ಮಡಿಲಲ್ಲಿ ಒಂದು ದಿನ ಸಮಯ ಕಳೆಯಲು ಹವಣಿಸುತ್ತಿದ್ದಾರೆ. ಇಂಥವರಿಗೆ ಅನುಕೂಲವಾಗಲೆಂದು ಕೆಎಸ್ಆರ್ಟಿಸಿ ಟೂರ್ ಪ್ಯಾಕೇಜ್ ಘೋಷಿಸಿದ್ದು, ತಲಾ 250 ರೂಪಾಯಿಯಲ್ಲಿ ಗಗನಚುಕ್ಕಿ-ಭರಚುಕ್ಕಿಗೆ ಪ್ರವಾಸ ಮಾಡಬಹುದು.
ನದಿಯಲ್ಲಿ ನೀರು ಹೆಚ್ಚಾಗಿರುವುದನ್ನು ತಿಳಿದ ಪ್ರವಾಸಿಗರು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಲು ಒಂದು ವಾರದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಮಂದಿ ಆಗಮಿಸುತ್ತಿದ್ದರು. ಕೆಎಸ್ಆರ್ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ರಜಾ ದಿನಗಳಲ್ಲಿ ಒಂದು ದಿನದ ಗಗನಚುಕ್ಕಿ- ಭರಚುಕ್ಕಿ ಟೂರ್ ಪ್ಯಾಕೇಜ್ ಆಯೋಜಿಸಲಾಗಿದೆ.
ಶನಿವಾರ ಮತ್ತು ಭಾನುವಾರ ಬೆಳಗ್ಗೆ 6.30ಕ್ಕೆ ಬೆಂಗಳೂರಿನ ಸ್ಯಾಟಲೈಟ್ ನಿಲ್ದಾಣದಿಂದ ಬಸ್ ಹೊರಡಲಿದೆ. ಸೋಮನಾಥಪುರ, ತಲಕಾಡು, ಮಧ್ಯರಂಗ, ಗಗನಚುಕ್ಕಿ-ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಿಕೊಂಡು ಬರಬಹುದು. ವಯಸ್ಕರಿಗೆ 400 ರೂ. ಹಾಗೂ ಮಕ್ಕಳಿಗೆ 250 ರೂ. ಪ್ಯಾಕೇಜ್ ದರ ನಿಗದಿಪಡಿಸಲಾಗಿದೆ.
ಜೋಗ ಜಲಪಾತ ವೀಕ್ಷಣೆಗೆ ಪ್ಯಾಕೇಜ್: “ಬೆಂಗಳೂರು- ಜೋಗ ಜಲಪಾತ’ ಮಾರ್ಗ ಶಿವಮೊಗ್ಗ, ಸಾಗರ ಎಸಿ ರಹಿತ ಸ್ಲೀಪರ್ ವಾಹನಗಳನ್ನು ವಾರಾಂತ್ಯದ ದಿನಗಳಲ್ಲಿ ಬಿಡಲಾಗಿದೆ. ಎರಡು ದಿನದ ಟೂರ್ ಪ್ಯಾಕೇಜ್ ಜು.22ರಿಂದ ಆರಂಭವಾಗಲಿದ್ದು, ವಯಸ್ಕರಿಗೆ 2,300 ರೂ. ಹಾಗೂ ಮಕ್ಕಳಿಗೆ 2,100 ರೂ. ದರ ನಿಗದಿಮಾಡಲಾಗಿದೆ. ಶುಕ್ರವಾರ ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹೊರಟು ಶನಿವಾರ ಬೆಳಗ್ಗೆ ವರದಹಳ್ಳಿ, ಇಕ್ಕೇರಿ, ಕೆಳದಿ, ಜೋಗ ಜಲಪಾತ, ಸಾಗರ ಮತ್ತು ಶಾಪಿಂಗ್ ಮಾಡಲು ಸಮಯ ನೀಡಿ ರಾತ್ರಿ 10 ಗಂಟೆಗೆ ಸಾಗರದಿಂದ ಬೆಂಗಳೂರಿಗೆ ವಾಪಸ್ ಹೊರಡಲಿದೆ.
ಚಿಕ್ಕಬಳ್ಳಾಪುರದ ಸರ್ಕಾರಿ ಕಾಲೇಜಿನಲ್ಲಿ ವಾಮಾಚಾರ? ಪ್ರಾಂಶುಪಾಲರ ಕೊಠಡಿಯಲ್ಲಿ ಕೆಂಪು ದಾರ-ಬೊಂಬೆ ಪತ್ತೆ!