ಮುಳಬಾಗಿಲು: 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಮೂರೇ ದಿನಕ್ಕೆ ಕೋಲಾರ ಜಿಲ್ಲೆ ಮುಲಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ಮೋಹನ್ರೆಡ್ಡಿ ದುರಂತ ಅಂತ್ಯ ಕಂಡಿದ್ದಾರೆ. ಮುತ್ಯಾಲಪೇಟೆ ಗಂಗಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದ ಜಗನ್ಮೋಹನರೆಡ್ಡಿ ದೇವರ ದರ್ಶನ ಪಡೆದು ಹೊರ ಬರುತ್ತಿದ್ದಂತೆ ದೇಗುಲದ ಎದುರೇ ಭಕ್ತರ ಸೋಗಲ್ಲಿ ಕಾಯುತ್ತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಪ್ರಕರಣ ಸಂಬಂಧ ಗ್ರಾಪಂ ಮಾಜಿ ಸದಸ್ಯೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿದಿನವೂ ಮುತ್ಯಾಲಪೇಟೆಯ ಗಂಗಮ್ಮ ದೇಗುಲಕ್ಕೆ ಬರುತ್ತಿದ್ದ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರ ಅಭಿಮಾನಿಯೂ ಆದ ಜಗನ್ಮೋಹನ್ರೆಡ್ಡಿ, ದೇವಸ್ಥಾನದ ಬೀಗ ತೆಗೆದು ಪೂಜೆಗೆ ಸಿದ್ಧತೆ ಮಾಡಿಕೊಟ್ಟು ಮನೆಗೆ ತೆರಳುತ್ತಿದ್ದರು. ಈ ವಿಷಯ ತಿಳಿದಿದ್ದ ಹಂತಕರು ಭಕ್ತರ ಸೋಗಿನಲ್ಲಿ ಮಂಗಳವಾರ ಮುಂಜಾನೆ ದೇಗುಲದ ಬಾಗಿಲು ತೆರೆಯುವುದನ್ನೇ ಕಾಯುತ್ತಿರುವಂತೆ ನಿಂತಿದ್ದರು. ಎಂದಿನಂತೆ ಜಗನ್ಮೋಹನ್ರೆಡ್ಡಿ ಬೀಗ ತೆಗೆದು ಗಂಗಮ್ಮ ದೇವಿ ದರ್ಶನ ಪಡೆದರು. ದೇಗುಲದಿಂದ ಹೊರಬರುತ್ತಿದ್ದಂತೆ ಸುತ್ತುವರಿದ ಹಂತಕರ ಪೈಕಿ ಇಬ್ಬರು ಚೂರಿಯಿಂದ ಇರಿದಿದ್ದಾರೆ. ಕೆಳಗೆ ಬೀಳುತ್ತಿದ್ದಂತೆ ಇನ್ನೂ ಮೂವರು ಹಂತಕರು ಮಚ್ಚಿನಿಂದ ಮನಸೋಯಿಚ್ಛೆ ಹಲ್ಲೆ ಮಾಡಿ ಕೈಗಳನ್ನು ಕತ್ತರಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಗನ್ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರಾದರೂ ಅಷ್ಟರಲ್ಲಿ ಅವರ ಪ್ರಾಣ ಹೋಗಿತ್ತು.
ರೌಡಿಶೀಟರ್ ಆಗಿದ್ದವರಿಗೆ ಕ್ಲೀನ್ ಚಿಟ್: ಎಸ್.ವಡ್ಡಹಳ್ಳಿಯಲ್ಲಿ 2000ನೇ ಸಾಲಿನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಆಗಿನ ಪಿಎಸ್ಐ ಬಿ.ಜಗನ್ನಾಥ ರೈ ಅವರು ಜಗನ್ಮೋಹನ್ರೆಡ್ಡಿ ವಿರುದ್ಧ ರೌಡಿಶೀಟ್ ತೆರೆದಿದ್ದರು. 2014ರಲ್ಲಿ ಆಗಿನ ಎಸ್ಪಿ ಇದನ್ನು ರದ್ದುಗೊಳಿಸಿ ಕ್ಲೀನ್ಚಿಟ್ ನೀಡಿದ್ದರು.
ಮೂರು ದಿನಗಳ ಹಿಂದಷ್ಟೇ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರೆಡ್ಡಿಗೆ ಪತ್ನಿ ರೂಪಾ, ಪುತ್ರ, ಪುತ್ರಿ ಇದ್ದಾರೆ. ಮೃತರ ಪತ್ನಿ ನಿರುಪಮಾ ನೀಡಿದ ದೂರಿನ ಮೇರೆಗೆ ಮುಳಬಾಗಿಲು ನಗರ ಠಾಣೆಯಲ್ಲಿ ಜಗನ್ನಾಥ, ಧನುಷ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಕಾಂತರಾಜ ಸರ್ಕಲ್ ಬಳಿಯ ತೋಟದಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.
ಗ್ರಾಪಂ ಮಾಜಿ ಸದಸ್ಯೆ ವಶಕ್ಕೆ: ನಂಗಲಿ ಸಮೀಪದ ತೊಂಡಹಳ್ಳಿಯಲ್ಲಿದ್ದ ಸಾವಿತ್ರಮ್ಮ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಕೆ ಹನುಮನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊತ್ತಮಂಗಲ ಕ್ಷೇತ್ರದ ಮಾಜಿ ಸದಸ್ಯೆ. 2018ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಈಕೆಯ ಪುತ್ರರಿಗೂ ಜಗನ್ಮೋಹನ್ ರೆಡ್ಡಿಗೂ ಜಗಳವಾಗಿತ್ತು. ಇದರಿಂದ ವೈಷಮ್ಯ ಬೆಳೆದಿತ್ತು. ಈ ಆಯಾಮದಲ್ಲೂ ತನಿಖೆ ಆರಂಭಿಸಿರುವ ಪೊಲೀಸರು, ರೆಡ್ಡಿ ಜತೆ ಹಳೇ ದ್ವೇಷ ಹೊಂದಿದ್ದ ಆರೋಪಿಗಳ ಚಲನವಲನಗಳ ಮೇಲೂ ನಿಗಾ ಇಟ್ಟಿದ್ದಾರೆ.
ಸತ್ತ ಗಂಡ ಹಾವಿನ ರೂಪದಲ್ಲಿ ಮನೆಗೆ ಬಂದನೇ..? ಬಾಗಲಕೋಟೆಯಲ್ಲಿ ಹಾವಿನ ಜತೆ 4 ದಿನ ವಾಸವಿದ್ದ ಅಜ್ಜಿ!
ಸಿಂದಗಿಯಲ್ಲಿ ಮಟಮಟ ಮಧ್ಯಾಹ್ನವೇ ಅಕ್ಕ-ತಮ್ಮನ ಭೀಕರ ಹತ್ಯೆ! ಕಲ್ಲಿನಿಂದ ಜಜ್ಜಿ ವಿಕೃತಿ ಮೆರೆದ ಗಂಡ