ಬೆಂಗಳೂರು: ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆ ಇಂದು(ಬುಧವಾರ) ರಾಜ್ಯಾದ್ಯಂತ ಶೋಕಾಚರಣೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಬೆಳಗಾವಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಆದರೆ, ಶೋಕಾಚರಣೆಯನ್ನು ಒಂದು ದಿನಕ್ಕೆ ಸೀಮಿತ ಮಾಡಿರುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ.
ಉಮೇಶ್ ಕತ್ತಿ ಅವರು ಹಾಲಿ ಸಚಿವರಾಗಿದ್ದವರು. ಅವರ ಅಕಾಲಿಕ ನಿಧನ ಅತೀವ ನೋವುವಂಟು ಮಾಡಿದೆ. ಗೌರವಾರ್ಥ ಮೂರು ದಿನ ಶೋಕಾಚರಣೆ ಘೋಷಣೆ ಮಾಡಬಹುದಿತ್ತು. ಆದರೆ ಸರ್ಕಾರ ಒಂದು ದಿನಕ್ಕೆ ಮಾತ್ರ ಘೋಷಣೆ ಮಾಡಿದೆ. ಯಾಕೆ ಹೀಗೆ ಮಾಡಿತೋ ಗೊತ್ತಿಲ್ಲ ಎಂದು ಬೇಸರಿಸಿದ್ದಾರೆ. ಇದರ ನಡುವೆಯೇ ನಾಳೆ(ಸೆ.8) ಜನೋತ್ಸವ ಕಾರ್ಯಕ್ರಮ ನಡೆಯುತ್ತಾ ಎಂಬ ಪ್ರಶ್ನೆಯೂ ಮೂಡಿದೆ.
ದೊಡ್ಡಬಳ್ಳಾಪುರಲ್ಲಿ ‘ಜನೋತ್ಸವ’ ಕಾರ್ಯಕ್ರಮ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ನಾಯಕರು ವೇದಿಕೆ ಸಿದ್ಧತೆ ಮಾಡಿದ್ದರು. ನಾಳೆಯೇ ಕಾರ್ಯಕ್ರಮ ನಡೆಯಲಿದೆ ಅನ್ನುವಷ್ಟರಲ್ಲಿ ಮುನ್ನಾ ದಿನ ರಾತ್ರಿಯೇ ದಕ್ಷಿಣ ಕನ್ನಡದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಹಾಗಾಗಿ ಕಾರ್ಯಕ್ರಮ ಮುಂದೂಡಲಾಗಿತ್ತು. ಇದೀಗ ಸೆ.8ರಂದು ಜನೋತ್ಸವ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆ ನಡೆದಿದೆ. ಆದರೆ, ಬಿಜೆಪಿ ಶಾಸಕರೂ ಆದ ಸಚಿವ ಉಮೇಶ್ ಕತ್ತಿ ಅವರು ಹೃದಯಾಘಾತದಿಂದ ಅಕಾಲಿಕ ಮರಣಕ್ಕೀಡಾಗಿದ್ದಾರೆ. ಹಾಗಾಗಿ ಜನೋತ್ಸವ ಕಾರ್ಯಕ್ರಮ ನಡೆಯುತ್ತಾ? ಮುಂದೂಡಿಕೆ ಆಗುತ್ತಾ? ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ. ಅತ್ತ ಸರ್ಕಾರ ಒಂದು ದಿನಕ್ಕೆ ಶೋಕಾಚಾರಣೆ ಘೋಷಿಸಿರುವುದನ್ನ ನೋಡಿದರೆ ಜನೋತ್ಸವ ಕಾರ್ಯಕ್ರಮ ನಡೆಯುತ್ತೆ ಎಂದೂ ಹಲವರು ಮಾತಾಡಿಕೊಳ್ಳುತ್ತಿದ್ದಾರೆ.
ಸಚಿವ ಉಮೇಶ್ ಕತ್ತಿ ನಿಧನ: ಗೌರವಾರ್ಥವಾಗಿ ರಾಜ್ಯಾದ್ಯಂತ ಇಂದು ಶೋಕಾಚರಣೆ