ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಸಂತ್ರಸ್ತೆಯ ಗೆಳೆಯ ಪೊಲೀಸರಿಗೆ ಕೊಟ್ಟ ವಿವರ ‘ದಿಗ್ವಿಜಯ ನ್ಯೂಸ್’ಗೆ ಲಭ್ಯವಾಗಿದೆ.
‘ಆ.24ರಂದು ನಾನು ಮತ್ತು ನನ್ನ ಗೆಳತಿ ಇಬ್ಬರೂ ತರಗತಿ ಮುಗಿಸಿಕೊಂಡು ಬೈಕ್ನಲ್ಲಿ ಹೊರಟೆವು. ಅಂದು ಸಂಜೆ 7.25ರಿಂದ 7.30ರ ಸುಮಾರಿಗೆ ಜೆಎಸ್ಎಸ್ ಆಯುರ್ವೇದಿಕ್ ಕಾಲೇಜಿನ ಮುಂದೆ ವಾಟರ್ ಟ್ಯಾಂಕ್ ಬಳಿಯ ಕಚ್ಚಾ ರಸ್ತೆಯಲ್ಲಿ ಹೋದೆವು. ನಾನು ಯಾವಾಗಲೂ ಜಾಗಿಂಗ್ಗೆ ಹೋಗುವ ಸ್ಥಳ ಅದಾಗಿತ್ತು. ಅಲ್ಲಿ ಹೋಗಿ ಬೈಕ್ ನಿಲ್ಲಿಸಿದಾಗ 25-30 ವರ್ಷ ವಯಸ್ಸಿನ 6 ಮಂದಿ ಬಂದರು. ಬಲ ಭಾಗದಿಂದ ಏಕಾಏಕಿ ಬಂದು ದೊಣ್ಣೆಯಿಂದ ನಮ್ಮ ಮೇಲೆ ಹಲ್ಲೆ ಮಾಡಿದರು. ನಂತರ ನನ್ನನ್ನು ತಳ್ಳಿ ನನ್ನ ಗೆಳತಿಯನ್ನು ಪೊದೆಯತ್ತ ಎಳೆದೊಯ್ದರು. ಆ ಗುಂಪಲ್ಲಿ ತೆಳ್ಳಗಿದ್ದ ಯುವಕನೊಬ್ಬ ನನ್ನ ಹಣೆಗೆ ಕಲ್ಲಿನಿಂದ ಹೊಡೆದ. ಆಗ ಪ್ರಜ್ಞೆ ತಪ್ಪಿ ಬಿದ್ದೆ. 15 ನಿಮಿಷದ ನಂತರ ಪ್ರಜ್ಞೆ ಬಂತು. ಆಗ 4 ಜನ ನನ್ನ ಮುಂದೆ ನಿಂತು ನನ್ನ ತಂದೆಗೆ ಫೋನ್ ಮಾಡಿಸಿದರು. 3 ಲಕ್ಷ ರೂಪಾಯಿ ಕೊಡುವಂತೆ ಒತ್ತಾಯಿಸಿದರು. ನಾನು ನನ್ನ ಗೆಳತಿ ಎಲ್ಲಿ? ಎಂದು ಕೇಳಿದೆ. ಅಷ್ಟರಲ್ಲಿ ಯುವಕರಿಬ್ಬರು ಆಕೆಯನ್ನು ಎಳೆದುಕೊಂಡು ಬಂದು ನನ್ನ ಪಕ್ಕದಲ್ಲಿ ಕೂರಿಸಿದರು. ಅವಳು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದಳು. ಅವಳಿಗೆ ತರಚಿದ ಗಾಯಗಳಾಗಿದ್ದವು’ ಎಂದು ಸಂತ್ರಸ್ತೆಯ ಸ್ನೇಹಿತ ವಿವರಿಸಿದ್ದಾರೆ. ಈ ಹೇಳಿಕೆ ಎಫ್ಐಆರ್ನಲ್ಲಿ ದಾಖಲಾಗಿದೆ.
ಮೈಸೂರು ನಗರದ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ಉತ್ತರ ಭಾರತ ಮೂಲದ ಯುವತಿ ಮೇಲೆ ಆ.24ರಂದು ಚಾಮುಂಡಿಬೆಟ್ಟದ ತಪ್ಪಲಿನ ಹೆಲಿಪ್ಯಾಡ್ ಬಳಿಯ ವಾಟರ್ ಟ್ಯಾಂಕ್ನ ಬಳಿ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆ ವೇಳೆ ಯುವತಿ ಜತೆ ಇದ್ದ ಸ್ನೇಹಿತನ ಮೇಲೂ ಕಾಮುಕರು ಹಲ್ಲೆ ಮಾಡಿ ಪರಾರಿಯಾಗಿದ್ದರು. ಆ ದುರಂತದ ಬಗ್ಗೆ ಪೊಲೀಸರಿಗೆ ಸಂತ್ರಸ್ತೆಯ ಸ್ನೇಹಿತ ಹೇಳಿಕೆ ಕೊಟ್ಟಿದ್ದು, ಸಂತ್ರಸ್ತೆ ಮಾತ್ರ ಏನನ್ನೂ ಕೇಳಬೇಡಿ ಎನ್ನುತ್ತಿದ್ದಾರೆ.
ಮೈಸೂರಲ್ಲಿ ಗ್ಯಾಂಗ್ ರೇಪ್: ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಕಾಮುಕರು, ರಾತ್ರಿವರೆಗೂ ಕಾದು ಅಟ್ಟಹಾಸ ಮೆರೆದ್ರು…